ಕಾರವಾರ: ದುಬಾರಿ ಬೆಲೆಯ ಗೋವಾ ಸರಾಯಿಯನ್ನು ತೆರಿಗೆ ತಪ್ಪಿಸಿ ರಾಜ್ಯಕ್ಕೆ ಸಾಗಿಸಿದ್ದ 72 ವರ್ಷದ ದತ್ತಾತ್ರೇಯ ಸಾಂದ್ಲು ನಾಯ್ಕ ಎಂಬಾತನ ಬಳಿಯಿದ್ದ ನೀಲಿ ಬಣ್ಣದ ಕೈ ಚೀಲವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಳಗಾದ ದತ್ತಾತ್ರೇಯ ನಾಯ್ಕ ನಿತ್ಯ ಗೋವಾಗೆ ಹೋಗಿ ಬರುತ್ತಿದ್ದ. ಆತನ ವರ್ತನೆ ಬಗ್ಗೆ ಪೊಲೀಸರಿಗೆ ಅನುಮಾನವಿತ್ತು. ಜೊತೆಗೆ ಬಾತ್ಮಿದಾರರೊಬ್ಬರು ಆತ ಅಕ್ರಮ ಸರಾಯಿ ಸಾಗಾಟದ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಹೀಗಾಗಿ ಪಿಎಸ್ಐ ಸುನೀಲಕುಮಾರ ಬಂಡಿಬಡ್ಡರ್ ಆತನನ್ನು ಶೋಧ ನಡೆಸಲು ನ್ಯಾಯಾಲಯದಿಂದ ವಾರೆಂಟ್ ಪಡೆದಿದ್ದರು.
ಸೆ 9ರಂದು ರಾತ್ರಿ 9 ಗಂಟೆಗೆ ದತ್ತಾತ್ರೇಯ ನಾಯ್ಕ ಬೋರೆದ ಬಸ್ ನಿಲ್ದಾಣದ ಬಳಿ ನಿಂತಿದ್ದ. ಆಗ ಅಲ್ಲಿಗೆ ಹೋದಪೊಲೀಸರು ಆತನ ಕೈಯಲ್ಲಿದ್ದ ನೀಲಿ ಬಣ್ಣದ ಕೈ ಚೀಲ ಪರಿಶೀಲಿಸಿದರು. ಅದರಲ್ಲಿ ಬಿಯರ್ ಹಾಗೂ ವಿಸ್ಕಿ ಬಾಟಲಿಗಳಿದ್ದು, ಅವೆಲ್ಲವೂ ಗೋವಾದಲ್ಲಿ ತಯಾರಾಗಿದ್ದವು. ಅದೆಲ್ಲವನ್ನು ವಶಕ್ಕೆ ಪಡೆದ ಪೊಲೀಸರು ಆತನ ವಿರುದ್ಧ ಅಕ್ರಮ ಸರಾಯಿ ಸಾಗಾಟದ ಪ್ರಕರಣ ದಾಖಲಿಸಿಕೊಂಡರು.




