ಕುಮಟಾ: ಕುಮಟಾ ಉಪ್ಪಾರಕೇರಿಯ ನಿರ್ಮಲಾ ಹಾಗೂ ಈಶ್ವರ್ ಉಪ್ಪಾರ್ ದಂಪತಿಗೆ ಮಗು ಹುಟ್ಟಿ ಎರಡುವರೆ ವರ್ಷ ಕಳೆದರೂ ಜನನ ಪ್ರಮಾಣ ಪತ್ರ ಸಿಗುತ್ತಿಲ್ಲ!
2022ರ ಮಾರ್ಚ 9ರಂದು ನಿರ್ಮಲಾ ಅವರು ಪಟ್ಟಣದ ಡಾ ಮಣಿಕರ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಾಣಂತನ ಹಾಗೂ ಅನಾರೋಗ್ಯದ ಕಾರಣ ಅವರು ಮನೆಗೆ ಮರಳಿದ್ದರು. 2024ರ ಫೆ 3ರಂದು ಆಸ್ಪತ್ರೆಯ ವೈದ್ಯ ಡಾ ಪ್ರಶಾಂತ ಕೆ ಮಣಿಕರ್ ಮಗುವಿನ ಜನನದ ಬಗ್ಗೆ ಪುರಸಭೆಗೆ ಮಾಹಿತಿ ನೀಡಿದ್ದರು. ಅವರು ಜನನ-ಮರಣ ನೊಂದಣಾಧಿಕಾರಿಗಳಿಗೆ ಅಧಿಕೃತ ಪತ್ರ ಬರೆದು ಮಗುವಿನ ಜನನದ ಬಗ್ಗೆ ತಿಳಿಸಿದ್ದರು.
ಆದರೆ, ಅಧಿಕಾರಿಗಳು ಮಗುವಿನ ಜನನ ಪ್ರಮಾಣ ಪತ್ರವನ್ನು ಕುಟುಂಬದವರಿಗೆ ನೀಡಿರಲಿಲ್ಲ. ಈ ಬಗ್ಗೆ ಸಾಕಷ್ಟು ಓಡಾಟ ನಡೆಸಿದರೂ ಜನನ ದಾಖಲೆ ಸಿಗಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ `ಜನನ ದಾಖಲೆ ಲಭ್ಯವಿಲ್ಲ’ ಎಂದು ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಹೀಗಾಗಿ ಆ ಗಂಡು ಮಗು ಹುಟ್ಟಿರುವುದಕ್ಕೆ ಸಾಕ್ಷಿಯೇ ಇಲ್ಲ!
ಜನನ ಪ್ರಮಾಣ ಪತ್ರ ಇಲ್ಲದ ಕಾರಣ ಬೇರೆ ಯಾವ ದಾಖಲೆಗಳನ್ನು ಮಾಡಿಸಲು ಆಗುತ್ತಿಲ್ಲ. ಮಗುವಿನ ಪಾಲಕರು ದೊಡ್ಡ ಪ್ರಮಾಣದ ಕಾನೂನು ಹೋರಾಟ ನಡೆಸಿ ದಾಖಲೆ ಪಡೆಯುವಷ್ಟು ಸ್ಥಿತಿವಂತರಲ್ಲ. ಅದಾಗಿಯೂ ಪುರಸಭೆಯಿಂದ ಅನ್ಯಾಯವಾದ ಬಗ್ಗೆ ಪಾಲಕರು 2024ರ ಫೆ 5ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಜನ ಸಾಮಾನ್ಯರ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡಿಗ್ಸ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲಿಯೂ ಬಗೆಹರಿದಿಲ್ಲ ಎಂದಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಎಚ್ಚರಿಸಿದ್ದಾರೆ.




