ಮುಂಡಗೋಡು: ಮಳೆ ನೋಡಲು ಕೆರೆ ಬಳಿ ಹೋದ ಬಾಲಕ ಶವವಾಗಿದ್ದು, ಕುಟುಂಬದವರನ್ನು ಸಮಾಧಾನ ಮಾಡಲು ನೆರೆದಿದ್ದವರಿಂದಲೂ ಸಾಧ್ಯವಾಗಿಲ್ಲ.
9ನೇ ತರಗತಿ ಓದುತ್ತಿದ್ದ ಪರಶುರಾಮ ದುರಮುರ್ಗಿ (15) ಬುಧವಾರ ಸಾಲಗಾಂವ್ ಊರಿನ ಗೌಡನಕಟ್ಟೆ ಕೆರೆ ಬಳಿ ಹೋಗಿದ್ದ. ಕರೆಯ ನೀರು ನೋಡಿ ಈಜಲು ಧುಮುಕಿದ್ದ. ಆದರೆ, ಆತ ನೀರಿನಿಂದ ಮೇಲೆ ಬಂದಿರಲಿಲ್ಲ. ಸಂಜೆಯಾದರೂ ಮಗ ಮನೆಗೆ ಬರದ ಕಾರಣ ಅವರ ತಂದೆ ಹುಡುಕಾಟ ನಡೆಸಿದ್ದರು. ಆತ ಕಾಣೆಯಾದ ಬಗ್ಗೆ ಪೊಲೀಸ್ ದೂರು ನೀಡಿದ್ದರು.
ರಾತ್ರಿ ಪರಶುರಾಮನ ಬಟ್ಟೆ ಕೆರೆ ಅಂಚಿನಲ್ಲಿ ಸಿಕ್ಕಿದ್ದು, ಗುರುವಾರ ಆತನ ಶವ ನೀರಿನಲ್ಲಿ ಕಾಣಿಸಿದೆ. ಪೊಲೀಸರು ಶವವನ್ನು ದಡಕ್ಕೆ ತಂದರು. ಮನೆ ಮಗನನ್ನು ಕಳೆದುಕೊಂಡ ಕುಟುಂಬದವರು ಬಿಕ್ಕಿ ಬಿಕ್ಕಿ ಅತ್ತರು. ಊರಿನವರು ಸೇರಿ ಸಮಾಧಾನ ಮಾಡುವ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಮುಂಡಗೋಡು ಆಸ್ಪತ್ರೆ ಶವಾಗಾರದಲ್ಲಿ ಬಾಲಕನ ಮರಣೋತ್ತರ ಪರೀಕ್ಷೆ ನಡೆಯಿತು. ಬಾಲಕನ ತಂದೆ ಹಣಮಂತ ದುರಮುರ್ಗಿ ಪೊಲೀಸ್ ದೂರು ನೀಡಿ ಶವ ಪಡೆದರು.




