ಕುಮಟಾ: ಕರಾವಳಿಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ವಿದ್ಯುತ್ ಲೈನ್ ಹಾಯಿಸಲಾಗಿದ್ದು ಅವು ಅಪಾಯದ ಅಂಚಿನಲ್ಲಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
ಕುಮಟಾ – ಅಂಕೋಲಾ ಮಾರ್ಗದ ಮಿರ್ಜಾನ ಬಳಿಯ ಕೋಡಕಣಿಯಲ್ಲಿ ಹೆದ್ದಾರಿಗೆ ಅಡ್ಡಲಾಗಿ ವಿದ್ಯುತ್ ತಂತಿ ಅಳೆಯಲಾಗಿದೆ. ಈ ತಂತಿಗೆ ಬಳ್ಳಿ ಹಬ್ಬಿದ್ದು ಆ ಬಳ್ಳಿಯ ಮೂಲಕ ಗಿಡ-ಮರಗಳಿಗೆ ವಿದ್ಯುತ್ ಪ್ರವಹಿಸುವ ಅಪಾಯವಿದೆ. ಹೀಗಾಗಿ ವಿದ್ಯುತ್ ತಂತಿಗೆ ಸುತ್ತುವರೆದ ಬಳ್ಳಿಯನ್ನು ಬಿಡಿಸಬೇಕು ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಆಗ್ರಹಿಸಿದ್ದಾರೆ. ಆದರೆ, ಅವರ ಆಗ್ರಹವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ.
ಹೆದ್ದಾರಿಗೆ ಅಡ್ಡಲಾಗಿ ಅಂದಾಜು 18 ಅಡಿ ಎತ್ತರದಲ್ಲಿ ವಿದ್ಯುತ್ ತಂತಿ ಎಳೆಯಲಾಗಿದ್ದು, ತಂತಿ ಜೋತು ಬಿದ್ದರೆ ಭಾರೀ ಗಾತ್ರದ ಲಾರಿ ಹಾಗೂ ಇನ್ನಿತರ ವಾಹನಗಳಿಗೆ ಅಪಾಯವಾಗುವ ಸಾಧ್ಯತೆಗಳಿದೆ. ಬಳ್ಳಿಯಿಂದ ಬರುವ ವಿದ್ಯುತ್ ಜಾನುವಾರುಗಳಿಗೆ ಮಾರಕವಾಗಲಿದೆ. `ಈ ಬಗ್ಗೆ ಮೊದಲು ಒಮ್ಮೆ ದೂರು ಕೊಡಲಾಗಿತ್ತು. ಇದೀಗ ಮತ್ತೆ ನೆನಪಿಸಲು ಫೋನ್ ಮಾಡಿದರೂ ಹೆಸ್ಕಾಂ ಅಧಿಕಾರಿ ರಾಜೇಶ್ ಮಡಿವಾಳ ಫೋನ್ ರಿಸಿವ್ ಮಾಡುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ದೂರಿದರು.
ಐಗಳಕೂರ್ವೆ, ಮಿರ್ಜಾನ್, ಕೋಡಕಣಿ ಸೇರಿ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಅಪಾಯಕಾರಿ ಸ್ಥಿತಿಯಲ್ಲಿರುವ ತಂತಿ ಮೂಲಕವೇ ವಿದ್ಯುತ್ ಪೂರೈಕೆಯಾಗುತ್ತಿದೆ.




