ಭಟ್ಕಳ: ಬೈಲೂರು ಮಾರ್ಕಂಡೇಶ್ವರದ ಮುಕ್ತಾ ನಾಯ್ಕ (38) ಅವರಿಗೆ ಅವರ ಗಂಡ ದಿನೇಶ ನಾಯ್ಕ (41) ಹೊಡೆದ ಪರಿಣಾಮ ಮುಕ್ತಾ ನಾಯ್ಕ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುರುಡೇಶ್ವರ ಪೊಲೀಸರು ಮುಕ್ತಾ ನಾಯ್ಕ ಅವರ ಹೇಳಿಕೆ ಪಡೆದು ಪತ್ನಿ ಮೇಲೆ ಹಲ್ಲೆ ನಡೆಸಿದ ಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
2009ರಲ್ಲಿ ಮುಕ್ತಾ ನಾಯ್ಕ ಅವರು ದಿನೇಶ ನಾಯ್ಕ ಅವರನ್ನು ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದಿನೇಶ ನಾಯ್ಕ ನಿತ್ಯವೂ ಮುಕ್ತಾ ಅವರಿಗೆ ಹಿಂಸೆ ನೀಡುತ್ತಿದ್ದು, ಇಷ್ಟು ವರ್ಷಗಳ ಕಾಲ ಅದನ್ನು ಸಹಿಸಿಕೊಂಡು ಬಂದಿದ್ದರು.
ಅಕ್ಟೊಬರ್ 28ರಂದು ಮುಕ್ತಾ ಅವರು ಬೈಕಿನ ಸಾಲ ತೀರಿಸಲು ಬ್ಯಾಂಕಿಗೆ ಹೋಗುತ್ತಿದ್ದರು. ಆಗ ಸರಾಯಿ ಕುಡಿದ ನಶೆಯಲ್ಲಿ ಬಂದ ದಿನೇಶ ನಾಯ್ಕ ಅವರ ಬೆನ್ನಿಗೆ ಗುದ್ದಿ ಬೈದಿದ್ದಾರೆ. `ಬ್ಯಾಂಕಿಗೆ ಹೋಗುವುದು ಬೇಡ’ ಎಂದು ತಾಕೀತು ಮಾಡಿದ್ದಾರೆ. ಜೊತೆಗೆ ಮತ್ತೆ ಸಾಕಷ್ಟು ಹೊಡೆದಿದ್ದು, ಆಗ ಅಲ್ಲಿದ್ದ ಶ್ರೀಧರ ಹರಿಕಂತ್ರ ಬಂದು ಮುಕ್ತಾ ಅವರನ್ನು ರಕ್ಷಿಸಿದರು.
ಪತಿ ಏಟಿಗೆ ನೋವು ಅನುಭವಿಸಿದ ಮುಕ್ತಾ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.




