ಹೊನ್ನಾವರ: ಜಳವಳವರ್ಕಿ ಹುಂಬಾಹಿತ್ಲಕೇರಿಯ ಸಂತೋಷ ಹಾಗೂ ಸತೀಶನ ನಡುವೆ ಮೊದಲಿನಿಂದಲೂ ವೈಮನಸ್ಸು ಇದ್ದು ಈ ಇಬ್ಬರ ನಡುವೆ ಮತ್ತೆ ಹೊಡೆದಾಟ ನಡೆದಿದೆ. ಸಂತೋಷ ನಾರಾಯಣ ಗೌಡರ ಮೇಲೆ ಸತೀಶ ಗಜಾನನ ನಾಯ್ಕ ಹಾಗೂ ಇನ್ನಿಬ್ಬರು ಸೇರಿ ಹೊಡೆದಿದ್ದಾರೆ. ಈ ಹೊಡೆದಾಟಕ್ಕೆ ನಿರ್ದಿಷ್ಟ ಕಾರಣ ಇಲ್ಲ.
ಅಕ್ಟೊಬರ್ 28ರ ರಾತ್ರಿ 8.30ರ ವೇಳೆಗೆ ಸಂತೋಷ ಗೌಡ ತಮ್ಮ ಮನೆಯ ಕಾಲು ದಾರಿಯಲ್ಲಿ ಒಂಟಿಯಾಗಿ ನಡೆದು ಹೋಗುತ್ತಿದ್ದರು. ಇದನ್ನು ನೋಡಿದ ಸತೀಶ ನಾಯ್ಕ ತನ್ನ ಸಹಚರರಾದ ಉದಯ ಮಾದವ ನಾಯ್ಕ, ಸೀತಾರಾಮ ಹನುಮಂತ ನಾಯ್ಕ ಜೊತೆ ಆಗಮಿಸಿ ಆಕ್ರಮಣ ನಡೆಸಿದ್ದಾರೆ.
ಮೊದಲಿನಿಂದಲೂ ಅನಗತ್ಯ ಕಿರಿಕಿರಿ ಮಾಡುತ್ತಿದ್ದ ಸತೀಶ ನಾಯ್ಕ ಈ ವೇಳೆ ಕುಟಾರೆ ಕಾವಿನಿಂದ ಕಾಲಿಗೆ ಹೊಡೆದಿದ್ದು, ಸಂತೋಷ ಗೌಡ ಗಾಯಗೊಂಡಿದ್ದಾರೆ. ಅದಾದ ನಂತರ ಸತೀಶ ನಾಯ್ಕರ ಜೊತೆ ಬಂದಿದ್ದ ಸಹಚರರು ಮೈಮೇಲೆ ಗುದ್ದಿ ನೋವು ಮಾಡಿದ್ದಾರೆ.
ಸಂತೋಷರ ತಂದೆ ನಾರಾಯಣ ಗೌಡ ಅಲ್ಲಿಗೆ ಬಂದು ಹೊಡೆದಾಟ ತಪ್ಪಿಸಿದ್ದಾರೆ. ಅದಾದ ನಂತರ ಸತೀಶ, ಉದಯ ಹಾಗೂ ಸೀತಾರಾಮ ಸೇರಿ ಜೀವ ಬೆದರಿಕೆ ಹಾಕಿದ ಬಗ್ಗೆ ಸಂತೋಷ ಗೌಡ ಪೊಲೀಸ್ ದೂರು ನೀಡಿದ್ದಾರೆ.
ಗಾಯಗೊಂಡ ಸಂತೋಷ ಗೌಡರನ್ನು ರಿಕ್ಷಾ ಮೇಲೆ ಕರೆದೊಯ್ದು ಹೊನ್ನಾವರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.




