ಕಾರವಾರ: ಹಿಂದುಳಿದ ಪ್ರದೇಶವಾದ ನಗೆ ಗ್ರಾಮಕ್ಕೆ ಕೈಗಾ ಅಣು ಘಟಕದಿಂದ ಹೊಸ ಶಾಲಾ ಕಟ್ಟಡ ಮಂಜೂರಾಗಿದೆ. ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯಲಿದೆ.
ಮಂಗಳವಾರ ನಡೆದ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಮಕ್ಕಳ ಪಾಲಕರಿಗೆ ಮುಖ್ಯ ಶಿಕ್ಷಕ ಅಖ್ತರ ಸೈಯದ್ ಈ ಬಗ್ಗೆ ಮಾಹಿತಿ ನೀಡಿದರು. `ಈ ಹಿಂದೆ ಹೊಸ ಕಟ್ಟಡ ಅಗತ್ಯವಿರುವ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅದಕ್ಕೆ ಮಂಜೂರಿ ಸಿಕ್ಕಿದೆ’ ಎಂದವರು ವಿವರಿಸಿದರು. ಪಾಲಕರ ಜೊತೆ ಮಕ್ಕಳು ಸಂತಸ ಹಂಚಿಕೊoಡರು.
ಶಾಲೆಯಲ್ಲಿ ಮಕ್ಕಳು ನಿರ್ಮಿಸಿದ ಕೈ ತೋಟ, ಇಕೋ ಕ್ಲಬ್ ಚಟುವಟಿಕೆ, ನಲಿ-ಕಲಿ ಕೋಣೆ ಮತ್ತು ಪೀಠೋಪಕರಣಗಳನ್ನು ನೋಡಿ ಮಾರ್ಗದರ್ಶಕ ರಾಜೇಂದ್ರ ಕೆರೆಮನೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಹಶಿಕ್ಷಕಿ ರೂಪಾ ನಾಯ್ಕ, ಅತಿಥಿ ಶಿಕ್ಷಕಿ ರೇಷ್ಮಾ ಹುಲಸ್ವಾರ, ಕೈಗಾ ಯೋಜನೆ ಶಿಕ್ಷಕಿ ಪ್ರಿಯಾ ಲಾಂಜೇಕರ, ಅಡುಗೆ ಸಿಬ್ಬಂದಿ ಶೋಭಾ ಗೌಡ, ಕಾಂಚನಾ ಗೌಡ ಈ ವೇಳೆ ಹಾಜರಿದ್ದು ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.




