ಯಲ್ಲಾಪುರ: ನಿನ್ನೆ ಮೊನ್ನೆಯವರೆಗೂ ಆರೋಗ್ಯವಾಗಿದ್ದ ಶಿಕ್ಷಕ ನಾರಾಯಣ ನಾಯಕ ಬುಧವಾರ ದಿಢೀರ್ ಹೃದಯಘಾತದಿಂದ ಸಾವನಪ್ಪಿದ್ದಾರೆ.
ಎಲ್ಲರ ಜೊತೆ ಅನ್ಯೋನ್ಯವಾಗಿದ್ದ ನಾರಾಯಣ ನಾಯಕ ವಿವಿಧ ಹಂತದ ಅಧಿಕಾರಿಗಳ ಜೊತೆ ಒಡನಾಟ ಹೊಂದಿದ್ದರು. ಹೀಗಾಗಿ ಅವರು ಶಿಕ್ಷಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು. ಇದೇ ಕಾರಣದಿಂದ ಒಕ್ಕೂರಲಿನಿಂದ ಶಿಕ್ಷಕರು ಅವರನ್ನು ಬೆಂಬಲಿಸುತ್ತಿದ್ದರು. ನಾರಾಯಣ ನಾಯಕ ಅವರು ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾಗಿದ್ದರು. ಈ ಸಂಘಕ್ಕೆ ಅವರು ಎರಡನೇ ಬಾರಿ ಅಧ್ಯಕ್ಷರಾಗಿದ್ದರು. 57 ವರ್ಷದ ಅವರು ಶಿಕ್ಷಕ ವೃತ್ತಿಯ ನಿವೃತ್ತಿ ಹಾಗೂ ಸಂಘದ ಅಧ್ಯಕ್ಷ ಅವಧಿ ಮುಕ್ತಾಯದ ಮುನ್ನವೇ ಕೊನೆ ಉಸಿರೆಳೆದರು.
ಹಿರೆಗುತ್ತಿಯವರಾದ ಅವರು 25 ವರ್ಷಗಳಿಗಿಂತಲೂ ಹೆಚ್ಚುಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. 1998ರಿಂದಲೂ ಅವರು ಯಲ್ಲಾಪುರದ ಬೀರಗದ್ದೆ-1 ಶಾಲೆಯಲ್ಲಿ ಸೇವೆಯಲ್ಲಿದ್ದರು. ಬುಧವಾರ ಯಲ್ಲಾಪುರದ ಸರ್ಕಾರಿ ನೌಕರರ ಭವನದ ಬಳಿ ಆಗಮಿಸಿದ್ದರು. ಅಲ್ಲಿ ಅವರಿಗೆ ಎದೆನೋವು ಕಾಣಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನಪ್ಪಿದರು.
`ಎಲ್ಲಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗಿಯಾಗುತ್ತಿದ್ದ ನಾರಾಯಣ ನಾಯಕರು ಶಿಕ್ಷಕರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುತ್ತಿದ್ದರು’ ಎಂದು ಅನೇಕ ಶಿಕ್ಷಕರು ಸ್ಮರಿಸಿದರು.




