ಯಲ್ಲಾಪುರ: `ಭಾರತೀಯ ಪರಂಪರೆಯಲ್ಲಿ ಕಲೆ, ಸಂಸ್ಕೃತಿ ಆರಾಧನೆ ನಡೆಯುವವರೆಗೂ ಈ ದೇಶ ಸುಭದ್ರ’ ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಶುಕ್ರವಾರ ಸಂಜೆ ಗಾಂಧೀ ಕುಟೀರದಲ್ಲಿ ನಡೆದ 38ನೇ ಸಂಕಲ್ಪ ಉತ್ಸವ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದ್ದು, `ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಕಲೆ ದೂರವಾಗುತ್ತಿದೆ. ಆದರೆ, ಯಕ್ಷಗಾನದ ಕಾರಣದಿಂದ ಸಾಹಿತ್ಯ, ಸಂಗೀತ ಸೇರಿದಂತೆ ಅನೇಕ ಕಲಾ ಪ್ರಕಾರಗಳು ಉಳಿದಿವೆ. ಕಲೆ ಎಂಬುದು ಧರ್ಮದ ನೆಲೆ’ ಎಂದು ಅವರು ಪ್ರತಿಪಾದಿಸಿದರು.
`ಸಂಕಲ್ಪ ಉತ್ಸವದಂಥ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಸಂಸ್ಕಾರ ನೀಡುವ ಕಾರ್ಯ ಮಾಡುತ್ತದೆ. ಸಣ್ಣ ಊರಿನಲ್ಲಿ ಸಂಸ್ಕೃತಿಯ ಉತ್ಸವ ನಡೆಯುತ್ತಿರುವುದು ಶ್ಲಾಘನೀಯ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ನಡುವೆಯೂ ಸಂಕಲ್ಪ ಉತ್ಸವವನ್ನು ಅಚ್ಚುಕಟ್ಟಾಗಿ ಸಂಘಟಿಸಲಾಗುತ್ತಿದೆ. ಅನೇಕ ವಿಘ್ನಗಳ ನಡುವೆಯೂ ಪ್ರಮೋದ ಹೆಗಡೆಯವರ ದೃಢ ಸಂಕಲ್ಪದ ಸಂಕಲ್ಪ ಉತ್ಸವ ನಡೆಯುತ್ತಿದೆ. ಕನ್ನಡ ಭಾಷೆಯ ಹೆಮ್ಮೆಯ ಕಲೆ ಯಕ್ಷಗಾನ ಪ್ರಧಾನವಾಗಿಸಿ ಉತ್ಸವ ಆಚರಿಸಲಾಗುತ್ತಿದೆ’ ಎಂದರು.
ಪತ್ರಕರ್ತ ವಿನಾಯಕ ಭಟ್ಟ ಮೂರೂರು ಮಾತನಾಡಿ `ಸಜ್ಜನ ರಾಜಕಾರಣಿ ಪ್ರಮೋದ ಹೆಗಡೆ ರಾಜಕಾರಣದಲ್ಲಿ ಬೆಳೆಯದೇ ಇದ್ದರೂ, ಕಲೆ ಸಂಸ್ಕೃತಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ’ ಎಂದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ `ಕಲೆ-ಸಂಸ್ಕೃತಿಯ ಉಳಿಯುವಿಕೆಗಾಗಿ ಸುಸಂಸ್ಕೃತ ಮನಸ್ಥಿತಿಯವರು ಇರಬೇಕು’ ಎಂದರು. ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ, ವಿನಾಯಕ ಭಟ್ಟ ಮೂರೂರು, ಡಿ ಶಂಕರ ಭಟ್ಟ ಅವರಿಗೆ ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟಿ.ಎಂ.ಎಸ್. ಅಧ್ಯಕ್ಷ ಎನ್ ಕೆ ಭಟ್ಟ ಅಗ್ಗಾಶಿಕುಂಬ್ರಿ, ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಶಶಿಭೂಷಣ ಹೆಗಡೆ, ಪ್ರಮುಖರಾದ ಸುಬ್ರಹ್ಮಣ್ಯ ಭಟ್ಟ, ಪ್ರಶಾಂತ ಹೆಗಡೆ, ಪಿ.ಜಿ.ಭಟ್ಟ ವಡ್ರಮನೆ ವೇದಿಕೆಯಲ್ಲಿದ್ದರು. ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವೇದಾ ಭಟ್ಟ ಪ್ರಾರ್ಥಿಸಿದರು, ಪದ್ಮಾ ಪ್ರಮೋದ ಹೆಗಡೆ ಗುರುವಂದನೆ ಮಾಡಿದರು. ಸಂಕಲ್ಪ ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿದರು. ಚಂದ್ರಕಲಾ ಭಟ್ಟ ನಿರ್ವಹಿಸಿದರು. ಮುಕ್ತಾ ಶಂಕರ ಸನ್ಮಾನ ಪತ್ರ ವಾಚಿಸಿದರು. ಡಾ ರವಿ ಭಟ್ಟ ಬರಗದ್ದೆ ವಂದಿಸಿದರು.




