ಕುಮಟಾ: ಜಲ ಜೀವನ್ ಮಿಷನ್ ಯೋಜನೆ ಅಡಿ ಗೋಕರ್ಣದ ಹಲವು ಭಾಗಗಳಿಗೆ ನೀರು ಪೂರೈಕೆಯಾಗುತ್ತಿದ್ದು, ಕಳೆದ ಒಂದು ವಾರದಿಂದ ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ಕಲುಷಿತ ನೀರು ಪೂರೈಸಿರುವ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿನ ಶುದ್ಧೀಕರಣ ನಡೆಸಿಯೇ ಪೂರೈಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದಾಗಿಯೂ ನೀರಿನಲ್ಲಿ ರಾಡಿ ಕಾಣಿಸಿಕೊಂಡಿದೆ. ಸಾಕಷ್ಟು ಪ್ರಮಾಣದಲ್ಲಿ ರಾಡಿ ನೀರು ಬಂದ ನಂತರ ಇದೀಗ ಬಿಳಿ ನೊರೆಯ ನೀರು ನಲ್ಲಿಯಲ್ಲಿ ಬರುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಕುಡಿಯುವ ನೀರಿನ ಯೋಜನೆಯನ್ನು ಇಲ್ಲಿ ಅನುಷ್ಠಾನಕ್ಕೆ ತರಲಾಗಿದ್ದು, ನಲ್ಲಿಯ ನೀರು ಬೇಸಿಗೆ ಅವಧಿಯಲ್ಲಿ ಜನರ ದಾಹ ತೀರಿಸುತ್ತದೆ. ಈ ಬಾರಿ ವ್ಯಾಪಕ ಪ್ರಮಾಣದಲ್ಲಿ ಮಳೆ ಆಗಿದ್ದರೂ ಕುಡಿಯಲು ಯೋಗ್ಯ ನೀರು ಸಿಗುತ್ತಿಲ್ಲ.
ಗ್ರಾಮ ಪಂಚಾಯತ ಅಧೀನದಲ್ಲಿ ಕುಡಿಯುವ ನೀರು ಪೂರೈಕೆಯ ನಿರ್ವಹಣೆ ನಡೆಯುತ್ತಿದೆ. ಗೋಕರ್ಣ ಗ್ರಾ ಪಂ ವ್ಯಾಪ್ತಿಯಲ್ಲಿ 1,800 ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. 3000 ಮನೆಯವರು ಯೋಜನೆ ನೀರಿನ ಸಂಪರ್ಕ ಬೇಡ ಎಂದು ಬರೆದುಕೊಟ್ಟಿದ್ದಾರೆ. ಹನೆಹಳ್ಳಿ, ಪೊರ್ಕೆ, ಹಿರೇಗುತ್ತಿ ಗ್ರಾ ಪಂ ವ್ಯಾಪ್ತಿಯಲ್ಲಿ ಸಹ ನೀರು ಪೂರೈಕೆ ಕಾರ್ಯ ನಡೆದಿದ್ದು, ಅಲ್ಲಿಯೂ ಈ ಸೇವೆ ಸರಿಯಾಗಿಲ್ಲ ಎಂಬ ದೂರಿದೆ.
`ಅಧಿಕ ಮಳೆಯಾದ ಕಾರಣ ಮಾದನಗೇರಿ ನೀರು ಸಂಗ್ರಹಣಾ ಘಟಕದಲ್ಲಿ ರಾಡಿಯಾಗಿತ್ತು. ನೀರು ಶುದ್ಧೀಕರಣ ಮಾಡಿ ಜನರಿಗೆ ಪೂರೈಕೆ ಮಾಡಲು ಸಮಯ ಬೇಕಿದ್ದು, ಈ ನಡುವೆ ನೀರು ಬಿಡುವ ಸಿಬ್ಬಂದಿಗೆ ಕೆಲವರು ಒತ್ತಡ ಹಾಕಿದ್ದರಿಂದ ರಾಡಿ ನೀರು ನಲ್ಲಿಗೆ ಬಂದಿದೆ. ಇದೀಗ ಎಲ್ಲವನ್ನು ಸರಿಪಡಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.




