ಯಲ್ಲಾಪುರ: ಕಿರವತ್ತಿ ಅರಣ್ಯ ಪ್ರದೇಶದಲ್ಲಿ ಸಹಚರರ ಜೊತೆ ಇಸ್ಪಿಟ್ ಆಡುತ್ತಿದ್ದ ವಾಚ್ಮೆನ್ ಗೌಡಪ್ಪ ನಾಯ್ಕ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಂದರ್ ಬಾಹರ್ ಆಡುತ್ತಿದ್ದ ಒಟ್ಟು 8 ಜನರ ವಿರುದ್ಧ ಪಿಎಸ್ಐ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿದ್ದಾರೆ.
ನವೆಂಬರ್ 1ರ ರಾತ್ರಿ 12.30ಕ್ಕೆ ಕಿರವತ್ತಿ ಜಯಂತನಗರದ ಅರಣ್ಯ ಪ್ರದೇಶದಲ್ಲಿ ಮೊಂಬತ್ತಿ ಬೆಳಕಿನಲ್ಲಿ ಇಸ್ಪಿಟ್ ಆಟ ನಡೆಯುತ್ತಿತ್ತು. ತಾಡಪತ್ರೆ ಹಾಸಿಕೊಂಡು ಕುಳಿತ ಎಲ್ಲರೂ ಜೂಜಾಟದಲ್ಲಿ ಮುಳುಗಿ ಹೋಗಿದ್ದರು. ವಾಚ್ಮೆನ್ ಗೌಡಪ್ಪ ಸಿದ್ದಪ್ಪ ನಾಯ್ಕ ಮುಂದಾಳತ್ವದಲ್ಲಿ ಜಯಂತನಗರದ ಸಾವೇರ ಸಾಲು ಸಿದ್ದಿ, ದ್ಯಾಮಣ್ಣ ಅಡಿವಪ್ಪ ಜಂಗಳಿ, ಮಹಮದ್ ಹನೀಪ್ ಮಾಬುಸಾಬ್ ಶೇಖ, ಗಜಾನಂದ ದ್ಯಾಮಣ್ಣ ದೂಳಿಕೊಪ್ಪ, ಮಾರುತಿ ಬಾಬು ದೋತ್ರೆ, ವ್ಯಾಪಾರಿ ಮಹಮದ್ ಶೇಖ್ ಉಮೇರ ಶೇಖ್ 4200ರೂ ಹಣವನ್ನು ಹರಡಿಕೊಂಡು ಇಸ್ಪಿಟ್ ಆಡುತ್ತಿದ್ದರು. ದಾಳಿ ನಡೆಸಿದ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದು ತಡಕಾಡಿದರು. ಇಸ್ಪಿಟ್ ಎಲೆ, ಹಣ, ಮೇಣದಬತ್ತಿ ಹಾಗೂ ತಾಡಪತ್ರೆಯನ್ನು ವಶಕ್ಕೆ ಪಡೆದರು. ಜೊತೆಗೆ ಜೂಜುಕೋರರ ವಿರುದ್ಧ ಪ್ರಕರಣ ದಾಖಲಿಸಿದರು.
ಮದನೂರಿನಲ್ಲಿ ಮಿಂಚಿನ ಕಾರ್ಯಾಚರಣೆ:
ಕಿರವತ್ತಿ ಅರಣ್ಯ ಪ್ರದೇಶದಲ್ಲಿ ಜೂಜುಕೋರರ ಮೇಲೆ ದಾಳಿ ನಡೆಸಿದ ನಂತರ ಪೊಲೀಸರಿಗೆ ಮದನೂರಿನಲ್ಲಿ ಸಹ ಅಂದರ್-ಬಾಹರ್ ನಡೆಯುವ ಬಗ್ಗೆ ಮಾಹಿತಿ ದೊರೆಯಿತು. ಕೂಡಲೇ ಅಲ್ಲಿಗೆ ತೆರಳಿದ ಪಿಎಸ್ಐ ಸಿದ್ದಪ್ಪ ಗುಡಿ ಅಲ್ಲಿಯೂ ನಾಲ್ವರನ್ನು ವಶಕ್ಕೆ ಪಡೆದರು.
ಮದನೂರು ಗ್ರಾಮದ ಸಾರ್ವಜನಿಕ ರಸ್ತೆ ಮೇಲೆ ರಾತ್ರಿ 1.45ರ ಸುಮಾರಿಗೆ ನಾಲ್ವರು ಇಸ್ಪಿಟ್ ಆಡುತ್ತಿದ್ದರು. ಪೊಲೀಸರು ಬಂದರೂ ಜೂಜುಕೋರರು ಕದಲುವ ಹಾಗಿರಲಿಲ್ಲ. ಜೂಜಾಟದಲ್ಲಿ ಮುಳುಗಿದ್ದ ಗಣಪತಿ ಪರಶುರಾಮ ಚಲವಾದಿ, ರಾಮು ಸಕ್ಕು ಕಾಳೆ, ಶಾನೂರು ರುದ್ರಪ್ಪ ಚಲವಾದಿ ಹಾಗೂ ಲಕ್ಷ್ಮಣ ಹುಲುಗೆಪ್ಪ ವಡ್ಡರ್ ಎಂಬಾತರನ್ನು ಪೊಲೀಸರು ವಶಕ್ಕೆ ಪಡೆದರು. ಆರೋಪಿತರು ಜೂಜಾಟಕ್ಕೆ ಬಳಸಿದ್ದ 2230ರೂ ಹಣದ ಜೊತೆ ಇಸ್ಪಿಟ್ ಪರಿಕ್ಕರಗಳನ್ನು ಜಪ್ತು ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಈ ಎರಡೂ ಪ್ರಕರಣಗಳ ಬಗ್ಗೆ ತನಿಖಾಧಿಕಾರಿ ಮಂಜಪ್ಪ ಪೂಜಾರಿ ಸಾಕ್ಷಿ ಸಂಗ್ರಹಿಸಿದ್ದಾರೆ. ಆರೋಪಿತರ ವಿರುದ್ಧ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸುವ ಸಿದ್ಧತೆ ನಡೆಸಿದ್ದಾರೆ.




