ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿಯಾಗಿ ಉತ್ತಮ ಕೆಲಸ ನಿರ್ವಹಿಸುತ್ತಿರುವ ವಿನೋದ ಅಣ್ವೇಕರ್ ಅವರ ಸೇವೆಯನ್ನು ಸರ್ಕಾರ ಗುರುತಿಸಿದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರ ಸೇವೆ ಸ್ಮರಿಸಿ ಸನ್ಮಾನಿಸಲಾಯಿತು.
1989ರಲ್ಲಿ ಸೇವೆಗೆ ಸೇರಿದ ವಿನೋದ ಅಣ್ವೇಕರ್ ಅವರು ಸಾಂಖ್ಯಿಕ ಅಧಿಕಾರಿಯಾಗಿದ್ದರು. ಪ್ರಸ್ತುತ ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಮುಖ್ಯ ಯೋಜನಾಧಿಕಾರಿಯಾಗಿದ್ದಾರೆ. ವಾರ್ಷಿಕ ಕರುಡು ಯೋಜನೆ ಸಿದ್ದಪಡಿಸುವಿಕೆ ಹಾಗೂ ಕ್ರಿಯಾ ಯೋಜನೆಗಳ ನಿರ್ವಹಣೆಯಲ್ಲಿ ವಿನೋದ ವರ್ಣೆಕರ್ ಅವರು ಅತ್ಯಂತ ಅಚ್ಚುಕಟ್ಟು. ವಸತಿ ಯೋಜನೆಯ ನೋಡಲ್ ಅಧಿಕಾರಿಯಾಗಿರುವ ವಿನೋದ ಅಣ್ವೇಕರ್ ಅವರು ಹೊನ್ನಾವರ ತಾಲೂಕಾ ಪಂಚಾಯತದ ಆಡಳಿತಾಧಿಕಾರಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಹಿಂದುಳಿದ ಮುಂಡಗೋಡ ಮತ್ತು ಜೋಯಿಡಾ ತಾಲೂಕನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಆಯ್ಕೆ ಪಟ್ಟಿಯಲ್ಲಿ ತರುವಲ್ಲಿ ಅವರ ಶ್ರಮ ಅಪಾರ. ವಿನೋದ ಅಣ್ವೇಕರ್ ಅವರ ಸೇವೆ ಗಮನಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯವರು `ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದ್ದರು. ಪ್ರಸ್ತುತ ಉತ್ತರ ಕನ್ನಡ ಜಿಲ್ಲಾ ಪಂಚಾಯತವೂ ಪೊಲೀಸ್ ಪೆರೆಡ್ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ವೇದಿಕೆಯಲ್ಲಿ ಅವರನ್ನು ಗೌರವಿಸಿದೆ.
ಆಡಳಿತಾತ್ಮಕ ಸಾಧನೆಗೆ ಸನ್ಮಾನ
ಉತ್ತರ ಕನ್ನಡ ಜಿಲ್ಲಾ ಪಂಚಾಯತಗೆ `ಬೆಸ್ಟ್ ಸ್ವೀಪ್ ಅವಾರ್ಡ’ ಬರುವಲ್ಲಿ ಮುಖ್ಯ ಪಾತ್ರ ನಿಭಾಯಿಸಿದ ಸುನೀಲ ಡಿ ನಾಯ್ಕ ಅವರನ್ನು ಕನ್ನಡ ರಾಜ್ಯೋತ್ಸವದ ವೇಳೆ ಜಿಲ್ಲಾಡಳಿತದ ಅಧಿಕಾರಿಗಳು ಸನ್ಮಾನಿಸಿದರು.
1995ರಲ್ಲಿ ಸರ್ಕಾರಿ ಸೇವೆಗೆ ಸೇರಿದ ಸುನೀಲ ನಾಯ್ಕ ಅವರು ಆಡಳಿತಾತ್ಮಕ ವಿಷಯದಲ್ಲಿ ಅಪಾರ ಜ್ಞಾನ ಹೊಂದಿದ್ದಾರೆ. ಸ್ವಚ್ಛ ಭಾರತ ಮಿಷನ್ ಯೋಜನೆ ಮೇಲುಸ್ತುವಾರಿ ಜೊತೆಗೆ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಯೋಜನೆಗಳ ಯಶಸ್ಸಿಗೆ ಅವರು ಶ್ರಮಿಸಿದ್ದಾರೆ.
ವಿಧಾನಸಭೆ ಹಾಗೂ ಲೋಕಸಭೆ ಚುನಾವಣಾ ಅವಧಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಅವರು ವಿನೂತನ ಯೋಜನೆಗಳ ಮಊಲಕ ಗಮನ ಸೆಳೆದಿದ್ದಾರೆ. ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿಗಳ ಆಪ್ತ ಸಹಾಯಕರಾಗಿಯೂ ಅವರು ಚುರುಕಿನಿಂದ ಕೆಲಸ ಮಾಡಿದ್ದಾರೆ. ಪ್ರಸ್ತುತ ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಆಡಳಿತ ವಿಭಾಗದ ಸಹಾಯಕ ನಿರ್ದೇಶಕರಾಗಿದ್ದು, ಅವರ ಸೇವೆಯನ್ನು ಸ್ಮರಿಸಿದ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದೆ.




