ಕಾರವಾರ: ಹಬ್ಬುವಾಡದ ಮಕ್ಕಳ ರಕ್ಷಣಾ ಘಟಕ ಕಚೇರಿಗೆ ತೆರಳುವಲ್ಲಿ ಅತ್ಯಂತ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ಬೋರ್ಡ ಅಳವಡಿಸಲಾಗಿದೆ. ಈ ಬಗ್ಗೆ ಗಮನಕ್ಕೆ ತಂದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ ಎಂದು ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಆರೋಪಿಸಿದ್ದಾರೆ.
`ಮಕ್ಕಳ ರಕ್ಷಣಾ ಘಟಕದ ಕಚೇರಿಗೆ ತೆರಳುವ ಮೆಟ್ಟಿಲುಗಳ ಮೇಲೆ ವಿದ್ಯುತ್ ಮೀಟರ್ ಅಪಾಯದಲ್ಲಿರುವ ಬಗ್ಗೆ ಅಕ್ಟೊಬರ್ 24ರಂದು ಮಕ್ಕಳ ರಕ್ಷಣಾ ಅಧಿಕಾರಿ ಸೋನಲ್ ಐಗಳ್ ಅವರಿಗೆ ಫೋನ್ ಮೂಲಕ ತಿಳಿಸಲಾಗಿದೆ. ನಿತ್ಯ ನೂರಾರು ಜನ ಬರುವ ಕಚೇರಿ ಅವ್ಯವಸ್ಥೆಯಿಂದ ಕೂಡಿದ್ದರೂ ಅದನ್ನು ಅವರು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ದೂರಿದರು.
`ಗೋಡೆಗೆ ತಾಗಿ ವಿದ್ಯುತ್ ತಂತಿಗಳು ಹಾದು ಹೋಗಿದ್ದರಿಂದ ಅವು ಜನರಿಗೆ ಸ್ಪರ್ಶವಾಗುವ ಸಾಧ್ಯತೆಗಳಿದೆ. ಇದರಿಂದ ವಿದ್ಯುತ್ ಶಾಕ್ ತಗುಲಿ ಅನಾಹುತವಾಗಲಿದ್ದು, ಅನಾಹುತ ನಡೆಯುವ ಮುನ್ನ ಅದನ್ನು ಬೇರೆ ಕಡೆ ಬದಲಿಸಬೇಕು. ಜಿಲ್ಲಾಧಿಕಾರಿಗಳಿಗೂ ಇಲ್ಲಿನ ಅಪಾಯದ ಬಗ್ಗೆ ವಾಟ್ಸಪ್ ಮೂಲಕ ಮನವರಿಕೆ ಮಾಡಲಾಗಿದೆ. ಅದಾಗಿಯೂ ಯಾವುದೇ ಕ್ರಮವಾಗಿಲ್ಲ’ ಎಂದು ವಿವರಿಸಿದರು.
`ಅನೇಕರು ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಈ ಕಚೇರಿಗೆ ಬರುತ್ತಾರೆ. ಅವರ ಭುಜಕ್ಕೆ ತಾಗುವ ರೀತಿಯಲ್ಲಿ ವಿದ್ಯುತ್ ತಂತಿಗಳಿವೆ. ಮಕ್ಕಳ ರಕ್ಷಣೆಗೆ ಆದ್ಯತೆ ನೀಡಬೇಕಿದ್ದ ಇಲಾಖೆ ಇಂಥ ಸಣ್ಣ ಸಣ್ಣ ಕೆಲಸ ಮಾಡಲು ಮೀನಾಮೇಷ ಎಣಿಸುತ್ತಿದೆ. ಹೀಗಾಗಿ ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಗಮನಕ್ಕೆ ತರಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ತಿಳಿಸಿದರು.




