ಸಿದ್ದಾಪುರ: ಮಹಿಳೆ ಮೇಲಿನ ಮಾನಭಂಗ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿತರಿಗೆ ಶಿರಸಿ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.
2019ರಲ್ಲಿ LIC ಪಾಲಿಸಿ ಕೇಳುವ ನೆಪದಲ್ಲಿ ಆರೋಪಿತರು ಕಾನಸೂರಿನ ಮಹಿಳೆಯೊಬ್ಬರ ಮನೆಗೆ ನುಗ್ಗಿದ್ದರು. ಮಹಿಳೆ ಬಳಿ ನೀರು ಕೊಡುವಂತೆ ಕೇಳಿದ್ದು, ನೀರು ತರಲು ಹೋದ ಆಕೆಯ ಮೇಲೆ ದುಷ್ಕರ್ಮಿಗಳು ಎರಗಿ ಮನಭಂಗಕ್ಕೆ ಯತ್ನಿಸಿದ್ದರು. ಈ ಮಹಿಳೆ ತನ್ನ ಗಂಡನಲ್ಲಿ ಹೇಳಿಕೊಂಡಿದ್ದು, ಆಕೆಯ ಪತಿ ದುಷ್ಕರ್ಮಿಗಳಿಗೆ ಫೋನ್ ಮಾಡಿ ಬೈದಿದ್ದರು.
ಇದೇ ದ್ವೇಷದ ಹಿನ್ನಲೆ ಮಹಿಳೆ ಹಾಗೂ ಅವರ ಪತಿ ಮೇಲೆ ನಾಲ್ವರು ಆಕ್ರಮಣ ನಡೆಸಿದ್ದರು. ಈ ವೇಳೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಎಲ್ಲಾ ಘಟನಾವಳಿಗಳ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಆದರೆ, ಸಾಕ್ಷಿ ಕೊರತೆ ಕಾರಣ ನಾರಾಯಣ ಕರಿಯಾ ನಾಯ್ಕ, ದೇವರಾಜ ನಾಗ ನಾಯ್ಕ, ಅಪ್ಪಯ್ಯ ಪುಲಕೇಶಿ ಕುಟ್ಟನ್ ಪಾಲಶರಿ ಹಾಗೂ ಚಂದ್ರಶೇಖರ ನಾಯ್ಕ ನಿರ್ದೋಷಿ ಎಂದು ಹೊರಬಂದಿದ್ದರು. ಅನ್ಯಾಯಕ್ಕೆ ಒಳಗಾದವರು ಈ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದು, ಶಿರಸಿ ನ್ಯಾಯಾಧೀಶ ಕಿರಣ ಕೇಣಿ ಈ ಪ್ರಕರಣದ ವಿಚಾರಣೆ ನಡೆಸಿದರು. ಸರ್ಕಾರಿ ವಕೀಲ ರಾಜೇಶ ಮಳಗಿಕರ್ ಸಾಕ್ಷಿ ಜೊತೆ ವಾದ ಮಂಡಿಸಿದ್ದು, ಅದನ್ನು ಆಲಿಸಿದ ನ್ಯಾಯಾಧೀಶರು ಆರೋಪಿತರಿಗೆ ಶಿಕ್ಷೆ ಪ್ರಕಟಿಸಿದರು.
ಎಲ್ಲಾ ಆರೋಪಿತರಿಗೆ ಮೂರು ವರ್ಷ ಜೈಲು. ಮೊದಲ ಆರೋಪಿಗೆ 12 ಸಾವಿರ ರೂ ಹಾಗೂ ಉಳಿದ ಆರೋಪಿಗಳಿಗೆ 10500ರೂ ದಂಡವನ್ನು ನ್ಯಾಯಾಧೀಶರು ವಿಧಿಸಿದರು. ಜೊತೆಗೆ ಸಂತ್ರಸ್ತೆಗೆ 5 ಸಾವಿರ ಹಾಗೂ ಸಂತ್ರಸ್ತೆಯ ಪತಿಗೆ 4 ಸಾವಿರ ರೂ ಪರಿಹಾರ ನೀಡುವಂತೆ ಘೋಷಿಸಿದರು.




