ಯಲ್ಲಾಪುರ: `ಭಾಗ್ವತರ ಸೊಪ್ಪಿನ ಬೆಟ್ಟಕ್ಕೂ ಬೇರೆಯವರ ಹೆಸರು!’ ಶಿರ್ಷಿಕೆ ಅಡಿ ಸೋಮವಾರ `S News Digital’ ವರದಿ ಪ್ರಸಾರ ಮಾಡಿದ್ದು, ಈ ಬೆನ್ನಲ್ಲೆ ವಿವಿಧ ಇಲಾಖೆ ಅಧಿಕಾರಿಗಳು ಗೂಗಲ್ ನಕ್ಷೆ ಹಿಡಿದು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.
ಗೂಗಲ್ ನಕ್ಷೆಯಲ್ಲಿ ಸೊಪ್ಪಿನ ಬೆಟ್ಟದ ಹೆಸರು ಬದಲಾವಣೆ ಇದೀಗ ಸರಿಯಾಗಿದ್ದು, ಈ ಕೃತ್ಯ ಎಸಗಿದ ಕಿಡಿಗೇಡಿ ಯಾರು? ಎಂಬ ಬಗ್ಗೆ ಚರ್ಚೆ ನಡೆದಿದೆ. ಆದರೆ, ಘಟನಾವಳಿಗಳಿಗೆ ಸಂಬOಧಿಸಿ ಮಹತ್ವದ ಯಾವುದೇ ಸಾಕ್ಷಿ ಲಭಿಸಿಲ್ಲ. ಅದಾಗಿಯೂ ಸಿಕ್ಕ ಸುಳಿವು ಆಧರಿಸಿ ಆ ಭಾಗದಲ್ಲಿ ಓಡಾಡಿದ ಕೆಲವರ ಮೇಲೆ ಅನುಮಾನ ವ್ಯಕ್ತವಾಗಿದೆ. ಕೆಲ ಅಪರಿಚಿತರು ಈ ಭಾಗದಲ್ಲಿ ಆಗಾಗ ಓಡಾಟ ನಡೆಸಿರುವ ಹಾಗೂ ಮಾದಕ ವ್ಯಸನ ಸೇವಿಸುವ ಬಗ್ಗೆ ಕೆಲವರು ತಿಳಿಸಿದ್ದು, ಅವರ ಮೇಲೆ ಹೆಚ್ಚಿನ ಅನುಮಾನಗಳಿವೆ.
ಹುತ್ಕಂಡ ಭಾಗದ ಫಾರೇಸ್ಟರ್ ಪ್ರಭಾಕರ ಬಗಲಿ ಹಾಗೂ ಗಾರ್ಡ ಅಲ್ಮಾಶ್ ಬಿಜಾಪುರ ಮಂಗಳವಾರ ಮೊದಲು ಸ್ಥಳ ಪರಿಶೀಲನೆ ನಡೆಸಿದರು. ಅದಾದ ನಂತರ ಸೊಪ್ಪಿನ ಬೆಟ್ಟದ ಹಳೆಯ ದಾಖಲೆಗಳನ್ನು ಪರಿಶೀಲಿಸಿದರು. `ಪಹಣಿಯಲ್ಲಿ ಸೊಪ್ಪಿನ ಬೆಟ್ಟ ಎಂದೇ ಉಲ್ಲೇಖವಿದ್ದು, ಅದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ’ ಎನ್ನುವುದರ ಬಗ್ಗೆ ಅವರು ಖಚಿತಪಡಿಸಿಕೊಂಡರು. ಗೂಗಲ್ ಮ್ಯಾಪ್’ನಲ್ಲಿ `ಕರೀಂ ಮಂಜಿಲ್’ ಎಂದು ದಾಖಲಾಗಿದ್ದರೂ, ಅಲ್ಲಿ ಯಾವುದೇ ಭವನ ಇಲ್ಲದಿರುವ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು.
ಇದಾದ ನಂತರ ಗ್ರಾಮ ಆಡಳಿತಾಧಿಕಾರಿ ರವಿ ರಾಯನಗೌಡರ್ ಸಹ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದರು. ಗೋಳಿಗದ್ದೆ ಶಾಲೆಯ ಬಳಿ ರಾಮಚಂದ್ರ ಭಾಗ್ವತ ಅವರು ಹೊಂದಿದ ಸೊಪ್ಪಿನ ಬೆಟ್ಟವನ್ನು ಗೂಗಲ್ ನಕ್ಷೆಯಲ್ಲಿ `ಕರೀಂ ಮಂಜಿಲ್’ ಎಂದು ದಾಖಲಾಗಿರುವುದು ಚರ್ಚೆಗೆ ಕಾರಣವಾಗಿತ್ತು. ಗೂಗಲ್ ನಕ್ಷೆಯಲ್ಲಿ ಮಾತ್ರ ಈ ಅವಾಂತರ ಕಂಡು ಬಂದಿದ್ದು, ಸರ್ಕಾರಿ ದಾಖಲೆಯಾದ ಪಹಣಿಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಪ್ರಸ್ತುತ ಗೂಗಲ್ ನಕ್ಷೆಯಲ್ಲಿ ಸಹ ಆ ಬರಹಗಳು ಕಾಣುತ್ತಿಲ್ಲ.




