ಮುಂಡಗೋಡು: ಇಂದೂರಿನ ಸಹೋದರರಾದ ಸಿದ್ದಯ್ಯ ಸುರಗಿಮಠ ಹಾಗೂ ಮೃತ್ಯುಂಜಯ ಸುರಗಿಮಠ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟ ತಪ್ಪಿಸಲು ಬಂದ ತಾಯಿ ಲಲಿತವ್ವ ಅವರನ್ನು ಮೃತ್ಯುಂಜಯ ಸುರಗಿಮಠ್ ನೆಲಕ್ಕೆ ಕೆಡವಿ ಹೊಡೆದಿದ್ದಾರೆ.
ಇಂದೂರು ಗ್ರಾಮದಲ್ಲಿ ಈ ಸಹೋದರರ ಹೆಸರಿನಲ್ಲಿ 4 ಎಕರೆ ಭೂಮಿಯಿದೆ. ಇಷ್ಟು ವರ್ಷಗಳ ಕಾಲ ಇಬ್ಬರು ಒಗ್ಗಟ್ಟಿನಿಂದ ಜೀವನ ನಡೆಸಿದ್ದರು. ಭೂಮಿಯಲ್ಲಿ ದುಡಿದು ಬಂದ ಆದಾಯದಿಂದ ಬದುಕುತ್ತಿದ್ದರು. ಆದರೆ, ಇದೀಗ ಮೃತ್ಯುಂಜಯ ಸುರಗಿಮಠ ಆಸ್ತಿಯಲ್ಲಿ ಭಾಗ ಕೇಳಿದ್ದು ಗಲಾಟೆಗೆ ಕಾರಣವಾಗಿದೆ.
ಸಿದ್ದಯ್ಯ ಶಾಂತಯ್ಯ ಸುರಗಿಮಠ ಹಾಗೂ ಮೃತ್ಯುಂಜಯ ಶಾಂತಯ್ಯ ಸುರಗಿಮಠ ಇಷ್ಟು ದಿನಗಳ ಕಾಲ ಒಂದೇ ಮನೆಯಲ್ಲಿ ವಾಸವಾಗಿದ್ದರು. ಪ್ರಸ್ತುತ ಮೃತ್ಯುಂಜಯ ಸುರಂಗಿಮಠ ಬೇರೆ ಮನೆ ಮಾಡುವ ಬಗ್ಗೆ ಮಾತನಾಡಿದನ್ನು ಸಿದ್ದಯ್ಯ ಸುರಂಗಿಮಠ ಸಹಿಸದ ಕಾರಣ ಹೊಡೆದಾಟ ನಡೆದಿದೆ.
ಇಬ್ಬರ ನಡುವೆ ಜಗಳ ನಡೆದಾಗ ಮೃತ್ಯುಂಜಯ ಅವರು ಮೊದಲು ಸಿದ್ದಯ್ಯ ಮೇಲೆ ಕೈ ಮಾಡಿದ್ದಾರೆ. ಇದನ್ನು ತಪ್ಪಿಸಲು ಬಂದ ತಾಯಿ ಲಲಿತವ್ವ ಮೇಲೆಯೂ ಮೃತ್ಯುಂಜಯ ಹಲ್ಲೆ ಮಾಡಿದ್ದಾರೆ. ಜೊತೆಗೆ ಇಬ್ಬರನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ ಬಗ್ಗೆ ಸಿದ್ದಯ್ಯ ಪೊಲೀಸ್ ದೂರು ನೀಡಿದ್ದಾರೆ.




