ಯಲ್ಲಾಪುರ: ರಾಜ್ಯಬಾರ ನಡೆಸುತ್ತಿರುವ ಸಚಿವರ ಮೇಲೆ ಸಾಲು ಸಾಲು ಹಗರಣಗಳ ಆರೋಪವಿದ್ದು, ಭ್ರಷ್ಟ ಸಚಿವರ ಪಟ್ಟಿ ಬೆಳೆಯುತ್ತಿರುವುದಕ್ಕೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಕಳವಳ ವ್ಯಕ್ತಪಡಿಸಿದ್ದಾರೆ.
`ಮೊದಲು ಅಪೆಕ್ಸ ಬ್ಯಾಂಕ್ ಹಗರಣದಲ್ಲಿ ಸಹಕಾರ ಸಚಿವ ಕೆ ಎನ್ ರಾಜಣ್ಣ ಹೆಸರು ಕೇಳಿ ಬಂದಿತ್ತು. ನಂತರ ಮೈಮೂಲ ರಾಜ್ಯಾಧ್ಯಕ್ಷರ ಪ್ರಕರಣದಲ್ಲಿ ಪಶುಸಂಗೋಪನಾ ಸಚಿವ ಕೆ ವೆಂಕಟೇಶ, ಸಕ್ಕರೆ ಕಾರ್ಖಾನೆ ಲಂಚದ ಹಗರಣದಲ್ಲಿ ಸಕ್ಕರೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ, ಸಾರಿಗೆ ಸಿಬ್ಬಂದಿ ಆತ್ಮಹತ್ಯೆ ಪ್ರಕರಣದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಸಿದ್ಧಾರ್ಥ ಟ್ರಸ್ಟ್ ಸೈಟು ಹಗರಣದಲ್ಲಿ ಗ್ರಾಮೀಣ ಸಚಿವ ಪ್ರಿಯಾಂಕ್ ಖರ್ಗೆ ಹೆಸರಿದೆ. ಇದರೊಂದಿಗೆ ವಾಲ್ಮೀಕಿ ಹಗರಣದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ, ಜೈಲು ಪಾಲು ನಾಗೇಂದ್ರ, ಮೂಡಾ ಹಗರಣದಲ್ಲಿ ನಗರಾಭಿವೃಧ್ದಿ ಸಚಿವ ಭೈರತಿ ಸುರೇಶ, ಬೀದರ ಭೂ ಕಬಳಿಕೆ ಪ್ರಕರಣದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ವಕ್ಫ ಬೋರ್ಡ ಹಗರಣದಲ್ಲಿ ಜಮೀರ ಅಹ್ಮದ್ ಹೆಸರು ಕೇಳಿ ಬಂದಿದೆ’ ಎಂದವರು ಹೇಳಿದ್ದಾರೆ.
`ಇದೀಗ ಲಿಕ್ಕರ್ ಹಗರಣದಲ್ಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೆಸರು ಮುಂಚೂಣಿಯಲ್ಲಿದೆ. ಕಂದಾಯ ಇಲಾಖೆ ಸಿಬ್ಬಂದಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೆಸರು ಕೇಳುತ್ತಿದೆ. ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವ ಅಧಿಕಾರಿಗಳೇ ಆರೋಪ ಮಾಡುತ್ತಿರುವುದು ಇನ್ನೊಂದು ವಿಶೇಷ’ ಎಂದವರು ಹೇಳಿದ್ದಾರೆ. `ಈ ಎಲ್ಲಾ ಹಗರಣಗಳ ತನಿಖೆ ನಡೆಯಬೇಕು’ ಎಂದು ರಾಮು ನಾಯ್ಕ ಆಗ್ರಹಿಸಿದ್ದಾರೆ.




