ಕುಮಟಾ: ಸರ್ಕಾರಿ ಯೋಜನೆಗೆ ಭೂಮಿ ಕೊಟ್ಟ ರೈತನಿಗೆ ಪರಿಹಾರ ನೀಡದ ಕಾರಣ ನ್ಯಾಯಾಲಯ ಕುಮಟಾ ಉಪವಿಭಾಗಾಧಿಕಾರಿ ಕಚೇರಿಯನ್ನು ಜಪ್ತು ಮಾಡಲು ಆದೇಶಿಸಿದೆ. ಈ ಹಿನ್ನಲೆ ಸಂತ್ರಸ್ತ ರೈತ ಉದಯ ಬಾಳಗಿ ನ್ಯಾಯಾಲಯದ ಸಿಬ್ಬಂದಿ ಜೊತೆ ತೆರಳಿ ಕಚೇರಿಯ ಕಂಪ್ಯುಟರ್ ಹಾಗೂ ಪೀಠೋಪಕರಣಗಳನ್ನು ಜಪ್ತು ಮಾಡಿದ್ದಾರೆ.
ಅಂಕೋಲಾ ತಾಲೂಕಿನ ಗುಂಡಬಾಳದಲ್ಲಿ ಉದಯ ಬಾಳಗಿ ಭೂಮಿ ಹೊಂದಿದ್ದರು. ಕುಡಿಯುವ ನೀರಿನ ಯೋಜನೆಗಾಗಿ 4 ಗುಂಟೆ ಕ್ಷೇತ್ರವನ್ನು ಅವರು ಸರ್ಕಾರಕ್ಕೆ ಬಿಟ್ಟು ಕೊಟ್ಟಿದ್ದರು. ಆದರೆ, ಸರ್ಕಾರದಿಂದ ಅವರಿಗೆ ನ್ಯಾಯಯುತವಾದ ಪರಿಹಾರ ಸಿಕ್ಕಿರಲಿಲ್ಲ. ಈ ಹಿನ್ನಲೆ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ಕುಮಟಾ ಜೆ ಎಂ ಎಫ್ ಸಿ ನ್ಯಾಯಾಲಯ ಉಪವಿಭಾಗಾಧಿಕಾರಿ ಕಚೇರಿಯನ್ನು ಜಪ್ತು ಮಾಡುವಂತೆ ಆದೇಶಿಸಿದೆ. ಈ ಹಿನ್ನಲೆ ಬುಧವಾರ ಕಚೇರಿಯ ಕಂಪ್ಯುಟರ್, ಪೀಠೋಪಕರಣ, ಜರಾಕ್ಸ ಯಂತ್ರ ಸೇರಿ ಹಲವು ವಸ್ತುಗಳನ್ನು ಜಪ್ತು ಮಾಡಲಾಗಿದೆ.




