ಕುಮಟಾ: ಅಂಚೆ ಇಲಾಖೆಯಲ್ಲಿ ಸಾರ್ವಜನಿಕರು ಇರಿಸಿದ ಹಣವನ್ನು ದುರುಪಯೋಗ ಮಾಡಿದ ಅಂಚೆ ಇಲಾಖೆ ನೌಕರ ಚಂದ್ರು ಹಮ್ಮು ಗೌಡ (37) ಎಂಬಾತರಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
2012ರ ಅವಧಿಯಲ್ಲಿ ಸೊಪ್ಪಿನಳ್ಳಿ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿದ್ದ ಚಂದ್ರು ಗೌಡ ಗ್ರಾಹಕರು ಜಮಾ ಮಾಡಿದ್ದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು. ಒಟ್ಟು 24647ರೂ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತ್ತು. ಜನರ ಪಾಸ್ಬುಕ್’ನಲ್ಲಿ ಹಣ ಜಮಾ ಆಗಿರುವುದನ್ನು ನಮೂದಿಸಿ ಮೊಹರು ಹಾಕಿದ್ದರು. ಆದರೆ, ಆ ಹಣವನ್ನು ಅಂಚೆ ಕಚೇರಿ ದಾಖಲೆಗಳಲ್ಲಿ ಕಾಣಿಸಿರಲಿಲ್ಲ.
ಸರ್ಕಾರಕ್ಕೆ ಜಮಾ ಮಾಡಬೇಕಾದ ಹಣವನ್ನು ಜಮಾ ಮಾಡದೇ ವಂಚಿಸಿದ ಬಗ್ಗೆ ಈ ಬಗ್ಗೆ ಅಂಚೆ ನಿರೀಕ್ಷಕ ದೀಪಕ ಎಚ್ ಟಿ ಪೊಲೀಸ್ ದೂರು ನೀಡಿದ್ದರು. ಅಂದಿನ ಪಿಎಸ್ಐ ವಸಂತ ಬಂಡೇಗಾರ್ ಹಾಗೂ ರೇವತಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲ ಮಂಜುನಾಥ ಬೋರ್ಕರ್ ಅಂಚೆ ಗ್ರಾಹಕರ ಪರವಾಗಿ ವಾದ ಮಂಡಿಸಿದ್ದರು. ಕುಮಟಾದ ಜೆ ಎಂ ಎಫ್ ಸಿ ನ್ಯಾಯಾಲಯ 17 ಸಾಕ್ಷಿಗಳ ವಿಚಾರಣೆ ನಡೆಸಿ 28 ದಾಖಲೆಗಳನ್ನು ಪರಿಶೀಲಿಸಿತು.
ನವೆಂಬರ್ 5ರಂದು `ಚಂದ್ರು ಹಮ್ಮು ಗೌಡ ತಪ್ಪು ಮಾಡಿರುವುದು ಸತ್ಯ’ ಎಂದು ನ್ಯಾಯಾಲಯ ಘೋಷಿಸಿತು. ಈ ವೇಳೆ `ತನ್ನ ದುಡಿಮೆಯೇ ಮೇಲೆ ಕುಟುಂಬದ ಎಲ್ಲರೂ ಜೀವನ ನಡೆಸುತ್ತಿದ್ದಾರೆ’ ಎಂದು ಚಂದ್ರು ಗೌಡ ಅಳಲು ತೋಡಿಕೊಂಡರು. `ತಪ್ಪು ತಿದ್ದಿಕೊಂಡು ಜೀವನ ನಡೆಸುವೆ’ ಎಂದು ಬೇಡಿಕೊಂಡರು. ಹೀಗಾಗಿ ನ್ಯಾಯಾಲಯ ಆರೋಪಿಗೆ 6 ತಿಂಗಳ ಶಿಕ್ಷೆ ಜೊತೆ 3 ಸಾವಿರ ರೂ ದಂಡ ಪಾವತಿಸುವಂತೆ ಆದೇಶಿಸಿತು.
ದಂಡ ಪಾವತಿಸಲು ವಿಫಲನಾದಲ್ಲಿ ಮತ್ತೆ ಒಂದುವರೆ ತಿಂಗಳ ಕಾಲ ಜೈಲು ಶಿಕ್ಷೆ ಮುಂದುವರೆಸುವ ಬಗ್ಗೆಯೂ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ




