ಯಲ್ಲಾಪುರ: ಸಿದ್ದಿ ಸಮುದಾಯದ ಡಮಾಮಿ, ಗೌಳಿ ಜನರ ಸಾಂಪ್ರದಾಯಿಕ ನೃತ್ಯದೊಂದಿಗೆ ಕಿರವತ್ತಿಯಲ್ಲಿ ಬುಧವಾರ ಕನ್ನಡ ಗಾಯನಗಳು ಮೊಳಗಿದ್ದವು. ಮಹಿಳೆಯರ ಡೊಳ್ಳು ಕುಣತದ ವೇಳೆ ನೆರೆದಿದ್ದ ಗಣ್ಯರು ಕುಣಿದು ಕುಪ್ಪಳಿಸಿದರು.
ಕನ್ನಡ ನಾಡು-ನುಡಿ ಸೇವೆಯಲ್ಲಿರುವ ಜಯ ಕರ್ನಾಟಕ ಸಂಘದವರು ಕಿರವತ್ತಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬುಧವಾರ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ನೂರಾರು ಜನ ಸಾಕ್ಷಿಯಾದರು. ಜಯಂತಿ ನಗರದಿಂದ ಹೊರಟ ಭುವನೇಶ್ವರಿ ಶೋಭಾಯಾತ್ರೆ ಕಣ್ಮನ ಸೆಳೆಯಿತು.
`ಗ್ರಾಮೀಣ ಪ್ರದೇಶದಲ್ಲಿಯೂ ಕನ್ನಡದ ಕಂಪು ಪ್ರಸರಿಸುವಲ್ಲಿ ಜಯ ಕರ್ನಾಟಕ ಸಂಘಟನೆ ಶ್ರಮಿಸುತ್ತಿದೆ’ ಎಂದು ಜಯ ಕರ್ನಾಟಕ ಸಂಘಟನೆ ಉಪಾಧ್ಯಕ್ಷ ಈಶಪ್ಪಣ್ಣ ನಾಯಕ ಹೇಳಿದರು. `ಕನ್ನಡದ ಮೇಲಿನ ಭಕ್ತಿಯೇ ಸಂಘಟನೆಯ ಶಕ್ತಿ’ ಎಂದು ಜಯ ಕರ್ನಾಟಕ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾoತ ಚವ್ವಾಣ್ ಅಭಿಪ್ರಾಯಪಟ್ಟರು.
ನಿವೃತ್ತ ಸೈನಿಕರಾದ ಮೈಯ್ಯ ಪಾಟೀಲ ಹಾಗು ಆರ್ ಆರ್ ಫರ್ನಾಂಡಿಸ್ ಅವರನ್ನು ಸಂಘಟನೆ ತಾಲೂಕಾಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಗೌರವಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಂಗಾಧರ ಲಮಾಣಿ ಅವರನ್ನು ಸನ್ಮಾನಿಸಿದರು. ಶಾಯಿನ್ ಮತ್ತು ಸುಮಂಗಲ ರೆಡ್ಡಿ ಪ್ರಾರ್ಥಿಸಿದರು, ಶಿಕ್ಷಕ ಗಂಗಾಧರ ಲಮಾಣಿ ಸ್ವಾಗತಿಸಿದರು.




