ಯಲ್ಲಾಪುರ: ಮದನೂರು ಗ್ರಾ ಪಂ ವ್ಯಾಪ್ತಿಯ ಅಲ್ಕೇರಿ ಗೌಳಿವಾಡದಲ್ಲಿ ಮೂರು ವರ್ಷದ ಹಿಂದೆ ನೀರಿನ ಟಾಕಿ ನಿರ್ಮಿಸಲಾಗಿದೆ. ಎರಡು ವರ್ಷದ ಹಿಂದೆ ಪೈಪ್ಲೈನ್ ಹುಗಿದು ಮನೆ ಮನೆಗೂ ನಲ್ಲಿ ಅಳವಡಿಸಲಾಗಿದೆ. ಆದರೆ, ಈವರೆಗೂ ಒಂದು ಹನಿ ನೀರು ಸಹ ಪೂರೈಕೆಯಾಗಿಲ್ಲ!
ಪ್ರತಿ ವರ್ಷ ಬೇಸಿಗೆಯಲ್ಲಿ ಈ ಭಾಗದ ಜನ ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಬಗ್ಗೆ ಅಲ್ಲಿನವರು ಹೋರಾಟ ನಡೆಸಿದ ಪರಿಣಾಮ ಜಲಜೀವನ್ ಮಿಷನ್ ಯೋಜನೆಗೆ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಿದರು. ಕಾಮಗಾರಿ ಕುಂಟುತ್ತ ಸಾಗಿದರೂ ಜನ `ಮುಂದಿನ ವರ್ಷವಾದರೂ’ ನೀರು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಎಲ್ಲಾ ಕೆಲಸ ಮುಗಿದು ಮೂರು ವರ್ಷ ಕಳೆದರೂ ನೀರು ಸಿಕ್ಕಿಲ್ಲ. ಜನರ ಸಮಸ್ಯೆಯೂ ಬಗೆಹರಿದಿಲ್ಲ!
ಕಾಮಗಾರಿ ಶುರು ಮಾಡುವ ಮುನ್ನ ಅಧಿಕಾರಿಗಳು ಜಲ ಶೋಧ ನಡೆಸಿಲ್ಲ. ನೀರಿನ ಮೂಲ ಹುಡುಕದೇ ಅಲ್ಲಿ ಟ್ಯಾಂಕ್ ನಿರ್ಮಿಸಿದರು. ಪೈಪ್ಲೈನ್ ಎಳೆದರು. ಮನೆ ಮನೆಗೆ ನಲ್ಲಿಯನ್ನು ಕೂರಿಸಿದರು. ಆದರೆ, ನೀರು ಸರಬರಾಜು ಮಾಡುವುದಕ್ಕಾಗಿ ಬೋರ್ವೆಲ್ ತೆಗೆದಾಗ ಮೂರು ಬೋರ್ವೆಲ್ ವಿಫಲವಾದವು. ಇದೇ ಕಾರಣದಿಂದ ಮಾಡಿದ ಕೆಲಸಗಳಿಗೆ ಗುತ್ತಿಗೆದಾರರಿಗೆ ಕಾಸು ಪಾವತಿಸಿದ ಅಧಿಕಾರಿಗಳು ನೀರು ಸರಬರಾಜು ಮಾಡುವುದನ್ನೇ ಮರೆತರು!
ಆ ಭಾಗದಲ್ಲಿ ಹಿಂದುಳಿದ ಗೌಳಿ ಸಮುದಾಯದವೇ ಹೆಚ್ಚಿದ್ದು, ನೀರಿಗಾಗಿ ಅವರೆಲ್ಲರೂ ನಿತ್ಯ ಕಾಯುತ್ತಿದ್ದರು. ಪೈಪ್ಲೈನ್ ಹಾಗೂ ನಲ್ಲಿ ಅಳವಡಿಕೆಗೆ ಬಂದ ಅಧಿಕಾರಿಗಳು ಮತ್ತೆ ಆ ಕಡೆ ಬರಲಿಲ್ಲ. ಕಚೇರಿಯಿಂದ ಕಚೇರಿ ಅಲೆದಾಟ ನಡೆಸಿದರೂ ಅಲ್ಲಿನವರಿಗೆ `ನೀರು ಕುಡಿಸುವ ಅಧಿಕಾರಿ’ ಯಾರು ಎಂದೇ ಗೊತ್ತಾಗಲಿಲ್ಲ.
ನೀರಿನ ಸಮಸ್ಯೆ ತೀವ್ರವಾದಾಗ ಸಮೀಪದ ಶಾಲೆಯಿಂದ ನೀರು ತಂದರು. ಶಾಲೆಯಲ್ಲಿಯೂ ನೀರಿನ ಸಮಸ್ಯೆ ಎದುರಾದಾಗ ಸಂಕಷ್ಟಕ್ಕೆ ಸಿಲುಕಿದರು. ತಮ್ಮ ಸಮಸ್ಯೆಯ ಬಗ್ಗೆ ಊರಿನವರು ಅಲ್ಕೇರಿಯ ಜಯ ಕರ್ನಾಟಕ ಗ್ರಾಮೀಣ ಘಟಕ ಅಧ್ಯಕ್ಷ ಜಿಮ್ಮು ಜೋರೆ ಅವರ ಮೊರೆ ಹೋದರು. ಗುರುವಾರ ಜಯ ಕರ್ನಾಟಕ ಸಂಘದ ತಾಲೂಕಾಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗಕ್ಕೆ ತೆರಳಿ ವಿಚಾರಿಸಿದರು. ಮೂರು ವರ್ಷ ಕಳೆದರೂ ನೀರು ಕೊಡಲಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
`ಈ ಭಾಗದಲ್ಲಿ 70ಕ್ಕೂ ಅಧಿಕ ಮನೆಗಳಿಗೆ ಕುಡಿಯುವ ನೀರಿಲ್ಲ. ಕೋಟ್ಯಂತರ ರೂ ವೆಚ್ಚ ಮಾಡಿದರೂ ನೀರು ಪೂರೈಕೆ ಆಗಿಲ್ಲ’ ಎಂದು ಸಂಘಟನೆಯವರು ಆಕ್ರೋಶ ವ್ಯಕ್ತಪಡಿಸಿದರು. `ನೀರು ಸರಬರಾಜು ಮಾಡದೇ ಇದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು. ಪ್ರಮುಖರಾದ ಜಾನು ಬಿಚ್ಚುಕುಲೆ, ಬಾಬು ಮಲ್ಗುಂಡೆ, ಜಾನು ಎಂಕರ್, ಸುಭಾಶ್ ಡಿ ಎಚ್, ಕೆ ಎಫ್ ಕಮಳನವರ್ ಇತರರು ಇದ್ದರು.




