ಮುಂಡಗೋಡ: ಪಟ್ಟಣದ ಹಲವು ರಸ್ತೆಗಳು ಹೊಂಡ-ಗುoಡಿಗಳಿoದ ಕೂಡಿದ್ದು, ಈ ಮಾರ್ಗದಲ್ಲಿ ಸಂಚರಿಸಲು ಇನ್ಸುರೆನ್ಸ ಕಡ್ಡಾಯ ಎಂದು ವಾಹನ ಸವಾರರು ಮಾತನಾಡುತ್ತಿದ್ದಾರೆ. ರಸ್ತೆ ಹೊಂಡ ಮುಚ್ಚುವಂತೆ ಜನ ಸಾಕಷ್ಟು ಬಾರಿ ಒತ್ತಾಯಿಸಿದರೂ ಅದನ್ನು ಯಾರೂ ಕಿವಿಗೆ ಹಾಕಿಕೊಂಡಿಲ್ಲ!
ಮು0ಡಗೋಡ ತಾಲೂಕಿನ ಅನೇಕ ಮುಖ್ಯ ರಸ್ತೆಗಳು ಹಾಳಾಗಿದೆ. ಹಾಳಾದ ರಸ್ತೆಯಲ್ಲಿ ವಾಹನ ಓಡಿಸುವುದು ಎಲ್ಲರಿಗೂ ಅನಿವಾರ್ಯವಾಗಿದೆ. ಇಲ್ಲಿನ ರಸ್ತೆಗಳಲ್ಲಿ ಬಸ್ಸು ಓಡಿಸಲು ಕೆಎಸ್ಆರ್ಟಿಸಿ ಚಾಲಕರು ಸಹ ಹೆದರುತ್ತಿದ್ದಾರೆ. `ಒಂದು ಗುಂಡಿ ತಪ್ಪಿಸಲು ಹೋದರೆ ಇನ್ನೊಂದು ಗುಂಡಿಯಲ್ಲಿ ಬೀಳುವುದು ಖಚಿತ’ ಎಂಬುದು ಅಲ್ಲಿನವರ ಮಾತು.
ಪಟ್ಟಣದ ಅಮ್ಮಾಜಿ ಕೆರೆದಿಂದ ಯಲ್ಲಾಪುರಕ್ಕೆ ಸಾಗುವ ರಸ್ತೆ ಮೇಲೆ ಸಾಕಷ್ಟು ಗುಂಡಿಗಳಿವೆ. ಮಳೆಗಾಲದ ವೇಳೆ ಗುಂಡಿಯ ಒಳಗೆ ನೀರು ನಿಲ್ಲುವುದರಿಂದ ಆಳ-ಅಗಲ ಗೊತ್ತಾಗುತ್ತಿಲ್ಲ. ಇದರಿಂದ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ-ಶಿರಸಿ ರಸ್ತೆಯ ಮಾಹಲೇ ಮಿಲ್ ಬಳಿ ಗುಂಡಿಗಳು ಕಾಣಿಸಿ ಐದು ವರ್ಷ ಕಳೆದಿದೆ. ಈವರೆಗೂ ಆ ಗುಂಡಿಗಳನ್ನು ಮುಚ್ಚಿಲ್ಲ. ಅಲ್ಲಿನ ಗುಂಡಿಗೆ ಬೈಕ್ ಸವಾರ ಬಲಿಯಾದ ನಂತರ ಜನ ಪ್ರತಿಭಟಿಸಿದ್ದರು. ಆಗ ಒಮ್ಮೆ ಗುಂಡಿ ಮುಚ್ಚುವ ಕೆಲಸ ನಡೆದಿದ್ದು, ಇದೀಗ ಮತ್ತೆ ಅಷ್ಟೇ ಪ್ರಮಾಣದ ಗುಂಡಿಗಳು ಹುಟ್ಟಿಕೊಂಡಿದೆ.
ಗುoಡಿಗಳ ಸಮಸ್ಯೆ ಜೊತೆ ಧೂಳಿನ ಸಮಸ್ಯೆ ಸಹ ಪ್ರಯಾಣಿಕರನ್ನು ಕಾಡುತ್ತಿದೆ. ಅನೇಕರು ಧೂಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಧೂಳು ಹಾಗೂ ಗುಂಡಿ ಸಮಸ್ಯೆಯಿಂದ ಮುಂಡಗೋಡಿನ ಜನ ರೋಸಿ ಹೋಗಿದ್ದು, ಅವರ ಅಳಲು ಕೇಳುವವರಿಲ್ಲ.




