ಕುಮಟಾ: ಗೋಕರ್ಣದಲ್ಲಿ ನಡೆಯುವ ವಾರದ ಸಂತೆಗೆ ಬಂದವರಿಗೆ ಸಿಡಿಲು ಬಡಿದಿದೆ.
ಗುರುವಾರ ಸಂಜೆ 4 ಗಂಟೆ ವೇಳೆಗೆ ಗೋಕರ್ಣದಲ್ಲಿ ಗುಡುಗುಸಹಿತ ಮಳೆ ಶುರುವಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಕೆಲವರು ಮರದ ಕೆಳಗೆ ನಿಂತರು. ಈ ವೇಳೆ ನಾಲ್ವರಿಗೆ ಸಿಡಿಲು ಬಡಿಯಿತು.
ಬಿದ್ರಗೇರಿಯ ಪರಮೇಶ್ವರ ಗೌಡ(56), ಬಿಹಾರದಿಂದ ಬಂದಿದ್ದ ನೂರ ಅಲಮಾ(40), ಮಹ್ಮದ್ ಆಜಾದ್ (30), ಆಯುಷ್ಕುಮಾರ (30) ಸಿಡಿಲಿನಿಂದ ಗಾಯಗೊಂಡರು. ಬಿಹಾರದ ಮೂವರು ರೆಸಾರ್ಟ ಕಟ್ಟಡ ನಿರ್ಮಾಣಕ್ಕಾಗಿ ಗೋಕರ್ಣಕ್ಕೆ ಬಂದವರಾಗಿದ್ದರು.
ಗಾಯಗೊಂಡ ನಾಲ್ವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಹಾಗೂ ಡಾ ದಿವ್ಯಾ ಜೊತೆ ಸಿಬ್ಬಂದಿ ಅವರನ್ನು ಜೀವಾಪಾಯದಿಂದ ಪಾರು ಮಾಡಿದ್ದಾರೆ. ಸಿಡಿಲಿನಿಂದ ಒಳಪೆಟ್ಟು ಆದವರಿಗೆ ವ್ಯಾಯಾಮ ಮಾಡಿಸಲಾಗುತ್ತಿದೆ. ಎಲ್ಲರಿಗೂ ಚಿಕಿತ್ಸೆ ಮುಂದುವರೆದಿದೆ.




