ಉತ್ತರ ಕನ್ನಡ ಜಿಲ್ಲೆಯ ಒಂಬತ್ತು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ನವೆಂಬರ್ 21ರ ಸಂಜೆಯಿoದ ನ 23ರ ಸಂಜೆಯವರೆಗೆ ಸರಾಯಿ ಸಿಗಲ್ಲ. ಆಯಾ ಭಾಗದಲ್ಲಿ ಆ ದಿನ ಸರಾಯಿ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದಕ್ಕೆ ಕಾರಣ ಉಪಚುನಾವಣೆ!
ಶಿರಸಿ, ಯಲ್ಲಾಪುರ, ಅಂಕೋಲಾ, ಕಾರವಾರ, ಹಳಿಯಾಳ, ಜೊಯಿಡಾ, ಹೊನ್ನಾವರ, ಸಿದ್ದಾಪುರ, ಕುಮಟಾ, ಮುಂಡಗೋಡು ಹಾಗೂ ದಾಂಡೇಲಿ ತಾಲೂಕಿನ ವಿವಿಧೆಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ನ 21ರಂದು ಸಂಜೆ 5 ಗಂಟೆ ನಂತರ ಸರಾಯಿ ಮಾರಾಟ ಮಾಡುವ ಹಾಗಿಲ್ಲ. ನ 23ರ ಸಂಜೆ 5 ಗಂಟೆಯವರೆಗೆ ಈ ಸರಾಯಿ ನಿಷೇಧ ಜಾರಿಯಲ್ಲಿರಲಿದೆ.
ಈ ಅವಧಿಯಲ್ಲಿ ಯಲ್ಲಾಪುರ ಹಾಗೂ ಅಂಕೋಲಾ ಪಟ್ಟಣದಲ್ಲಿ ಎಲ್ಲಿಯೂ ಸರಾಯಿ ಮಾರಾಟ ಇರುವುದಿಲ್ಲ. ಈ ಅವಧಿಯಲ್ಲಿ ಮದ್ಯ ಮಾರಾಟ ಮಾತ್ರವಲ್ಲ, ಸಾಗಾಟವನ್ನು ಸಹ ಅಪರಾಧ ಎಂದು ಸರ್ಕಾರ ಪರಿಗಣಿಸುತ್ತದೆ. ಕಾರವಾರ ತಾಲೂಕಿನ ಚಿತ್ತಾಕುಲಾ, ಅಂಕೋಲಾ ತಾಲೂಕಿನ ಸಗಡಗೇರಿ, ಕುಮಟಾ ತಾಲೂಕಿನ ಹನೇಹಳ್ಳಿ, ಬರ್ಗಿ, ಹೊನ್ನಾವರ ತಾಲೂಕಿನ ಮಾಗೋಡ, ಭಟ್ಕಳ ತಾಲೂಕಿನ ಶಿರಾಲಿ, ಶಿರಸಿ ತಾಲೂಕಿನ ಬಿಸಲಕೊಪ್ಪ, ಹುತ್ತಗಾರ, ಸಿದ್ದಾಪುರ ತಾಲೂಕಿನ ದೊಡ್ಮನೆ ಭಾಗದಲ್ಲಿ ಸಹ ಸರಾಯಿ ಮಾರಾಟ-ಸಾಗಾಟಕ್ಕೆ ತಡೆ ಒಡ್ಡಲಾಗಿದೆ.
ಮುಂಡಗೋಡ ತಾಲೂಕಿನ ಹುನಗುಂದ, ಹಳಿಯಾಳ ತಾಲೂಕಿನ ಬೆಳವಟಗಿ, ಜನಗಾ, ಅರ್ಲವಾಡ, ದಾಂಡೇಲಿ ತಾಲೂಕಿನ ಅಂಬಿಕಾನಗರ ಮತ್ತು ಜೋಯಿಡಾ ತಾಲೂಕಿನ ಕಾತೇಲಿ (ಕುಂಬಾರವಾಡಾ), ನೇದರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ನ 21 ರಂದು ಸಂಜೆ 5 ಗಂಟೆಯಿ0ದ ನ 23 ರ ಸಂಜೆ 5 ಗಂಟೆಯವರೆಗೆ ಎಲ್ಲಾ ರೀತಿಯ ಮದ್ಯ ಮಾರಾಟ – ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ.




