ಭಟ್ಕಳ: ತೆಂಗಿನಗುoಡಿ ನದಿ ಬಳಿ ಬಂದರು ಇಲಾಖೆಗೆ ಸೇರಿದ ಕಟ್ಟಡವನ್ನು ಮೂವರು ದುಷ್ಕರ್ಮಿಗಳು ಸೇರಿ ಧ್ವಂಸ ಮಾಡಿದ್ದಾರೆ.
ಕರಾಟೆ ಮಾಸ್ಟರ್ ಉಮೇಶ ಮೊಗೇರ್ ಈ ಕಟ್ಟಡದಲ್ಲಿ ಒಣಮೀನು ದಾಸ್ತಾನು ಮಾಡಿದ್ದರು. ಏಕಾಏಕಿ ಕಟ್ಟಡ ನೆಲಸಮವಾಗಿದ್ದರಿಂದ ಒಣ ಮೀನುಗಳೆಲ್ಲವೂ ಮಣ್ಣು ಪಾಲಾಗಿದೆ. ಹೆಬಳೆ ಮಲ್ಲಜ್ಜನ ಮನೆಯ ಉಮೇಶ ರಾಮಾ ಮೊಗೇರ್ ಅವರ ತಂದೆ ಕಾಲದಿಂದಲೂ ಈ ಕಟ್ಟಡವನ್ನು ಅವರು ಬಳಸುತ್ತಿದ್ದರು. 15 ವರ್ಷಗಳಿಂದ ಉಮೇಶ ಮೊಗೇರ್ ಅವರು ನಿರ್ವಹಣೆ ನೋಡಿಕೊಳ್ಳುತ್ತಿದ್ದರು. ಇದಕ್ಕಾಗಿ ತೆರಿಗೆಯನ್ನು ಸಹ ಅವರೇ ಪಾವತಿಸುತ್ತಿದ್ದರು.
ಗಾಳಿ-ಮಳೆಗೆ ಕಟ್ಟಡದ ಶೀಟ್ ಹಾರಿ ಹೋದಾಗ ಸರ್ಕಾರದಿಂದ ರಿಪೇರಿ ಮಾಡಿಸಿದ್ದು, ಈ ಕಟ್ಟಡದ ಮೇಲೆ ಬಂದರು ಇಲಾಖೆ ಹೊರತುಪಡಿಸಿ ಬೇರೆ ಯಾರಿಗೂ ಹಕ್ಕಿರಲಿಲ್ಲ. ಅದಾಗಿಯೂ ಅ 26ರಂದು ಚಬ್ಬಿಮನೆಯ ನಾರಾಯಣ ಮೊಗೇರ್, ಲಕ್ಷö್ಮಣ ಮಂಜುನಾಥ ಕರ್ಕಿಮನೆಯ ಹಾಗೂ ಮಾವಿನಕಟ್ಟೆಯ ಜೆಸಿಬಿ ಚಾಲಕ ಗಣೇಶ ನಾಯ್ಕ ಸೇರಿ ಆ ಕಟ್ಟಡವನ್ನು ಧ್ವಂಸ ಮಾಡಿದ್ದಾರೆ. ಆ ವೇಳೆ ಅಲ್ಲಿ ಒಣಗಿಸಿದ್ದ ಒಣ ಮೀನುಗಳೆಲ್ಲವೂ ನಾಶವಾಗಿದೆ. ಏಕಾಏಕಿ ಆಗಮಿಸಿ ಧ್ವಂಸ ಮಾಡಿದನ್ನು ಪ್ರಶ್ನಿಸಿದ ಕರಾಟೆ ಪಟು ಉಮೇಶ ಮೊಗೇರ್ ಅವರನ್ನು ಬೆದರಿಸಿದ್ದಾರೆ. `ಇಲ್ಲಿಯೇ ಇದ್ದರೆ ಜೆಸಿಬಿಯಿಂದ ಅಗೆದು ಮಣ್ಣಿನ ಅಡಿ ಹೂತು ಹಾಕುವೆ’ ಎಂದು ಎದುರುದಾರರು ಬೆದರಿಸಿದ ಬಗ್ಗೆ ಉಮೇಶ್ ಮೊಗೇರ್ ಪೊಲೀಸ್ ದೂರು ನೀಡಿದ್ದಾರೆ.




