ಕುಮಟಾ: ಸರ್ಕಾರಿ ಆಸ್ಪತ್ರೆ ಸುತ್ತಲಿನ ತ್ಯಾಜ್ಯವನ್ನು ಪುರಸಭೆ ಸ್ವಚ್ಛಗೊಳಿಸಿದೆ. ಜಿಲ್ಲಾಡಳಿತದ ಸೂಚನೆ ನಂತರ ಪುರಸಭೆ ಈ ಕಾರ್ಯ ನಡೆಸಿದೆ.
ಸರ್ಕಾರಿ ಆಸ್ಪತ್ರೆ ಸುತ್ತ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಸುರಿದಿದ್ದು, ಪ್ಲಾಸ್ಟಿಕ್ ಚೂರುಗಳು ಬಿದ್ದಿದ್ದವು. ಇದರಿಂದ ಸುತ್ತಲಿನ ವಾತಾವರಣ ಕಲುಷಿತವಾಗಿತ್ತು. ಆಸ್ಪತ್ರೆಗೆ ಬರುವ ರೋಗಿಗಳು ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಸ್ಥಿತಿಯಿದ್ದರೂ ಈ ಬಗ್ಗೆ ಅಧಿಕಾರಿಗಳು ಗಮನಿಸಿರಲಿಲ್ಲ. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗಿಸ್ ಹಾಗೂ ಸುಧಾಕರ ನಾಯ್ಕ ಈ ಬಗ್ಗೆ ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. `ಕ್ರಮ` ಜರುಗಿಸುವೆ’ ಎಂಬ ಭರವಸೆ ನೀಡಿದ ಈ ಅಧಿಕಾರಿಗಳು ಸ್ವಚ್ಛತೆ ಕಾಪಾಡಲು ಯಾವುದೇ ಕ್ರಮ ಜರುಗಿಸಿರಲಿಲ್ಲ.
ಈ ಹಿನ್ನಲೆ ಆಗ್ನೇಲ್ ರೋಡ್ರಿಗಿಸ್ ಜಿಲ್ಲಾಡಳಿತದ ವಾಟ್ಸಪ್ ದೂರು ವಿಭಾಗಕ್ಕೆ ಫೋಟೋ-ದಾಖಲೆ ಸಲ್ಲಿಸಿದ್ದರು. ಅಲ್ಲಿ ದೂರು ಸಲ್ಲಿಕೆಯಾದ ಒಂದೇ ದಿನದಲ್ಲಿ ಆಸ್ಪತ್ರೆ ಪಕ್ಕದ ತ್ಯಾಜ್ಯಗಳು ಮಾಯವಾಗಿದೆ. ಪುರಸಭೆ ಅಧಿಕಾರಿಗಳು ಜಿಲ್ಲಾಡಳಿತದ ಸೂಚನೆ ಮೇರೆಗೆ ಆ ಪ್ರದೇಶವನ್ನು ಸ್ವಚ್ಛಗೊಳಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. `ತ್ಯಾಜ್ಯವನ್ನು ತೆರವು ಮಾಡಲಾಗಿದೆ’ ಎಂದು ದೂರುದಾರರಿಗೆ ವಾಟ್ಸಪ್ ದೂರು ವಿಭಾಗದಿಂದ ಹಿಂಬರಹವನ್ನು ನೀಡಲಾಗಿದೆ.




