ಯಲ್ಲಾಪುರ: ಹಿತ್ಲಳ್ಳಿ ವಾಟೆಹಳ್ಳದ ಇಳಿಹಳ್ಳಿ ಚಂದ್ರಶೇಖರ ಕುಣಬಿ ತೋಟದಲ್ಲಿದ್ದ ಕಂಚಿ ಹಣ್ಣಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.
ಚoದ್ರಶೇಖರ ನಾರಾಯಣ ಕುಣಬಿ (34) ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದರು. ಕೂಲಿ ಹಣದಲ್ಲಿಯೇ ಅವರು ಕುಟುಂಬ ನಡೆಸುತ್ತಿದ್ದರು. ಆದರೆ, ಅವರು ವಿಪರೀತ ಸರಾಯಿ ಕುಡಿಯುತ್ತಿದ್ದರು. ಈ ಕಾರಣದಿಂದ ಮಾನಸಿಕವಾಗಿ ಅವರು ಕುಗ್ಗಿದ್ದರು. ಸಮಾಧಾನ ಮಾಡಿದ ಅವರ ಪತ್ನಿ ಶೃತಿ ಕುಣಬಿ `ಕುಡಿತ ಬೇಡ’ ಎಂದು ಬುದ್ದಿಮಾತು ಹೇಳಿದ್ದರು. ಆದರೆ, ಪತ್ನಿ ಮಾತನ್ನು ಚಂದ್ರಶೇಖರ ಕುಣಬಿ ಕೇಳಿರಲಿಲ್ಲ.
ನ 13ರ ರಾತ್ರಿ 8 ಗಂಟೆಗೆ ಮನೆಯಲ್ಲಿದ್ದ ಚಾದರ ತೆಗೆದುಕೊಂಡು ತೋಟಕ್ಕೆ ಹೊರಟ ಅವರು ತಾಸು ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ 9.30ರ ವೇಳೆಗೆ ಶೃತಿ ಸಹ ಬ್ಯಾಟರಿ ಹಿಡಿದು ತೋಟಕ್ಕೆ ಹೋದಾಗ ಅಲ್ಲಿ ಚಂದ್ರಶೇಖರ್ ಚಾದರ ಬಿಗಿದುಕೊಂಡು ಕಂಚಿ ಹಣ್ಣಿನ ಮರಕ್ಕೆ ನೇತಾಡುತ್ತಿದ್ದರು. ಅವರು ಸಾವನಪ್ಪಿದ ಬಗ್ಗೆ ಶೃತಿ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.




