ಕಾರವಾರ: ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದ ಸಮೂಹ ಸಂಪನ್ಮೂಲ ವ್ಯಕ್ತಿ ನಾಸೀರ ಖಾನ್ ಅಬ್ದುಲ್ ಕರಂ ಎದೆನೋವಿನಿಂದ ಕುಸಿದುಬಿದ್ದಿದ್ದು, ಎಂಟು ಆಂಬುಲೆನ್ಸ್’ಗೆ ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಕ್ಕಿಲ್ಲ. ಅರ್ದ ತಾಸು ಕಳೆದ ನಂತರ 9ನೇ ಆಂಬುಲೆನ್ಸ್ ಮೂಲಕ ನಾಸೀರ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಶನಿವಾರ ಗೀತಾಂಜಲಿ ಸರ್ಕಲ್ ಬಳಿಯಿರುವ ಉರ್ದು ಶಾಲೆಯಲ್ಲಿ ನಾಸೀರ್ ಖಾನ್ ಅವರು ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದರು. ಏಕಾಏಕಿ ಎದೆ ಹಿಡಿದುಕೊಂಡ ಅವರು ಮುಗ್ಗರಿಸಿ ಬಿದ್ದರು. ಕೂಡಲೇ ಅಲ್ಲಿದ್ದ ಶಿಕ್ಷಕರು ಅವರನ್ನು ಹಿಡಿದು ಪೆಟ್ಟಾಗದಂತೆ ನೋಡಿಕೊಂಡರು. ಸುದ್ದಿ ಕೇಳಿದ ರಿಕ್ಷಾ ಚಾಲಕರು ಸ್ಥಳಕ್ಕೆ ಬಂದು 108 ಆಂಬುಲೆನ್ಸ್’ಗೆ ಫೋನ್ ಮಾಡಿದರು. ಆದರೆ, ಆಂಬುಲೆನ್ಸ್ ಅಂಕೋಲಾದಿ0ದ ಬರಬೇಕು ಎಂಬ ಉತ್ತರ ಸಿಕ್ಕಿತು. ಇನ್ನೊಮ್ಮೆ ಪ್ರಯತ್ನಿಸಿದಾಗ ಕದ್ರಾದಿಂದ ಆಂಬುಲೆನ್ಸ ತರಿಸಬೇಕು ಎಂಬ ಮಾಹಿತಿ ದೊರೆಯಿತು.
ಈ ಹಿನ್ನಲೆ ಅಲ್ಲಿದ್ದ ಇತರೆ ಶಿಕ್ಷಕರು ಖಾಸಗಿ ಆಂಬುಲೆನ್ಸ್ ಮೊರೆ ಹೊದರು. ಆದರೆ, ಖಾಸಗಿ ಆಂಬುಲೆನ್ಸ ಸಹ ಸಮಯಕ್ಕೆ ಸರಿಯಾಗಿ ಸಿಗಲಿಲ್ಲ. ಒಟ್ಟು ಎಂಟು ಕಡೆ ಆಂಬುಲೆನ್ಸ್’ಗಾಗಿ ಫೋನ್ ಮಾಡಿದರೂ ಶನಿವಾರ ತುರ್ತು ವಾಹನ ಲಭ್ಯವಿರಲಿಲ್ಲ. ಕೊನೆಗೆ ಶಿಕ್ಷಕ ಅಖ್ತರ್ ಶೇಖ್ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರಿಗೆ ಫೋನ್ ಮಾಡಿ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಅರ್ದ ತಾಸು ಕಳೆದ ನಂತರ 9ನೇಯ ಫೋನ್ ಕರೆಗೆ ಖಾಸಗಿ ಆಂಬುಲೆನ್ಸ್ ಸಿಕ್ಕಿದ್ದು ಅದರ ಮೂಲಕ ನಾಗಮಂಗಲ ಹೃದಯಾಲಯಕ್ಕೆ ನಾಸೀರ್ ಶೇಖ್ ಅವರನ್ನು ದಾಖಲಿಸಲಾಯಿತು.
ತೀವೃ ಅಸ್ವಸ್ಥಗೊಂಡಿದ್ದ ನಾಸೀರ್ ಖಾನ್ ಅವರು ವಾಂತಿ ಮಾಡಿಕೊಂಡಿದ್ದರು. ತಲೆಸುತ್ತು ಬಂದು ಬಿದ್ದಿದ್ದರು. `ನಾಸೀರ್ ಖಾನ್ ಅವರು ಬಿಪಿ ಮಾತ್ರೆ ಸೇವಿಸುತ್ತಿದ್ದು, ಈಚೆಗೆ ಅದನ್ನು ತ್ಯಜಿಸಿದ್ದರು. ಎಸಿಡಿಟಿಯಿಂದ ಅವರಿಗೆ ಎದೆನೋವು ಬಂದು, ವಾಂತಿ ಮಾಡಿಕೊಂಡಿದ್ದಾರೆ’ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ. `ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ದಿನ ಅವರನ್ನು ಆಸ್ಪತ್ರೆಯಲ್ಲಿರಿಸಿಕೊಂಡು ಸಂಪೂರ್ಣ ಗುಣಮುಖವಾದ ಮೇಲೆ ಬಿಡುಗಡೆ ಮಾಡಲಿದ್ದಾರೆ’ ಎಂದು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ ಶಿಕ್ಷಣಾಧಿಕಾರಿ ಚಂದ್ರಹಾಸ ರಾಯ್ಕರ್ ಮಾಹಿತಿ ನೀಡಿದರು.




