ಯಲ್ಲಾಪುರ: ಜೋಡಕೆರೆ ಬಳಿ ಅನಧಿಕೃತವಾಗಿ ಮೀನು ಮಾರಾಟ ನಡೆಯುತ್ತಿರುವ ಬಗ್ಗೆ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ಶನಿವಾರ ಮೀನು ಮಾರಾಟಗಾರರನ್ನು ಅಲ್ಲಿಂದ ಎಬ್ಬಿಸಿದ ಪ ಪಂ ಸಿಬ್ಬಂದಿ ಆ ಪ್ರದೇಶವನ್ನು ಸ್ವಚ್ಛಗೊಳಿಸಿದರು.
ಯಲ್ಲಾಪುರ ಪಟ್ಟಣದಲ್ಲಿ ಅಧಿಕೃತ ಮೀನು ಮಾರುಕಟ್ಟೆ ಇದ್ದರೂ ಎಲ್ಲೆಂದರಲ್ಲಿ ಮೀನು ಮಾರಾಟ ನಡೆಯುತ್ತಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗುವುದರ ಜೊತೆ ಮೀನು ಮಾರಾಟದ ಪರಿಸರವೂ ಹಾಳಾಗುತ್ತಿದೆ. ಜೋಡಕೆರೆಯ ಆಂಜಿನೇಯ ದೇವಾಲಯ ಅಂಚಿನಲ್ಲಿ ಕಳೆದ ಒಂದು ವರ್ಷದಿಂದ ಅನಧಿಕೃತ ಮೀನು ಮಾರುಕಟ್ಟೆ ನಡೆಯುತ್ತಿದ್ದು, ಬೇರೆ ಬೇರೆ ತಾಲೂಕಿನಿಂದ ಬರುವ ಮಹಿಳೆಯರು ಇಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಎಚ್ಚರಿಕೆ ನೀಡಿದರೂ ಅನಧಿಕೃತ ಮೀನು ವ್ಯಾಪಾರಕ್ಕೆ ಕಡಿವಾಣ ಬಿದ್ದಿಲ್ಲ.
ಶುಕ್ರವಾರ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಪಟ್ಟಣ ಪಂಚಾಯತಗೆ ಈ ಬಗ್ಗೆ ದೂರು ಸಲ್ಲಿಸಿದ್ದರು. ಅನಧಿಕೃತ ಮೀನು ಮಾರಾಟ ತಡೆಯದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದರು. ಈ ಹಿನ್ನಲೆ ಜೋಡಕೇರೆ ದೇವಾಲಯದ ಬಳಿಯಿದ್ದ ಮೀನು ಮಾರಾಟಗಾರರನ್ನು ಪ ಪಂ ಸಿಬ್ಬಂದಿ ಒಕ್ಕಲೆಬ್ಬಿಸಿದರು. ಅದಾದ ನಂತರ ಟ್ಯಾಂಕರ್ ಮೂಲಕ ನೀರು ಹಾಯಿಸಿ ಅಲ್ಲಿನ ಮಾಲಿನ್ಯವನ್ನು ಸ್ವಚ್ಛ ಮಾಡಿದರು.
ತಮ್ಮ ಪತ್ರಕ್ಕೆ ಸ್ಪಂದಿಸಿದ ಅಧಿಕಾರಿ-ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿರುವ ಸೋಮು ನಾಯ್ಕ ಇನ್ಮುಂದೆಯೂ ಅನಧಿಕೃತ ಮೀನು ಮಾರಾಟಕ್ಕೆ ಅವಕಾಶ ಕೊಡದಂತೆ ಆಗ್ರಹಿಸಿದ್ದಾರೆ.




