ಉತ್ತರ ಕನ್ನಡ ಜಿಲ್ಲೆಯ ಯಾಣದ ಬಳಿ ಭಾನುವಾರ ಬೆಳಗ್ಗೆ 11.59ಕ್ಕೆ ಭೂ ಕಂಪನವಾಗಿದೆ. ಭೂಮಿಯ 5ಕಿಮೀ ಆಳದಲ್ಲಿ ಕಂಪನವಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟಿನಲ್ಲಿ ಭೂ ಕಂಪನದ ಬಗ್ಗೆ ದಾಖಲಾಗಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಭೂ ಕಂಪನ ಆಗಿರುವುದನ್ನು ಅಲ್ಲಗಳೆದಿದೆ!
ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಕುಮಟಾ ತಾಲೂಕಿನ ಕೆಲ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವ ಆದ ಬಗ್ಗೆ ಜನ ಸಾಕಷ್ಟು ಪ್ರಮಾಣದಲ್ಲಿ ಚರ್ಚಿಸಿದ್ದರು. ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದವರು ಭೂಕಂಪನದ ಮಾತನ್ನು ಅಲ್ಲಗಳೆದಿದ್ದರು. ಉತ್ತರ ಕನ್ನಡ ಜಿಲ್ಲಾಡಳಿತ ಸಹ ಭೂಮಿ ಕಂಪಿಸಿಲ್ಲ ಎಂದು ಪ್ರಕಟಣೆ ಹೊರಡಿಸಿತ್ತು. ಆದರೆ, ಸೋಮವಾರ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟಿನಲ್ಲಿ ಯಾಣದ ಬಳಿ ಭೂ ಕಂಪನ ಆದ ಬಗ್ಗೆ ದಾಖಲಿಸಲಾಗಿದೆ.
ಯಾಣದ ಅಕ್ಕ ಪಕ್ಕದಲ್ಲಿರುವ ಬೀರಂಜಿ-ಕುಳಿಗದ್ದೆ ಪ್ರದೇಶದ ನಡುವೆ ಭೂಮಿ ಕಂಪಿಸಿದೆ. ಅದರ ಪರಿಣಾಮ ಜೋಗ, ಶಿರಸಿ ಬಳಿಯ ದೇವಿಮನೆ ಘಟ್ಟ, ರಾಗಿ ಹೊಸಳ್ಳಿ, ಕಸಗೆ, ಬಂಡಳ, ತಟ್ಟಿಕೈ, ಹೆಗ್ಗರಣಿ, ವಾನಳ್ಳಿ, ಮತ್ತಿಘಟ್ಟ, ಸಂಪಖoಡ ಭಾಗದಲ್ಲಿ ಜನ ಹೆಚ್ಚಿನ ಪ್ರಮಾಣದಲ್ಲಿ ಭೂ ಕಂಪನದ ಅನುಭವ ಹಂಚಿಕೊ0ಡಿದ್ದರು. ಸಿದ್ದಾಪುರದ ಕಾನಸೂರು, ಯಲ್ಲಾಪುರದ ಚೌವತ್ತಿ ಭಾಗದಲ್ಲಿಯೂ ಕೆಲವರು ಭೂಕಂಪ ಆದ ಬಗ್ಗೆ ಹೇಳಿಕೊಂಡಿದ್ದರು.
ಇದನ್ನು ಓದಿ: ಭೂಕಂಪನದ ಬಗ್ಗೆ ಜನ ಹೇಳಿದ್ದು ಸುಳ್ಳಾ?
ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತದ ವಿಪತ್ತು ನಿರ್ವಹಣಾ ಕೋಶದವರು ಬೆಂಗಳೂರು ಕಚೇರಿಗೆ ಭೂ ಕಂಪನದ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದವರು ಅದನ್ನು ನಿರಾಕರಿಸಿದ್ದು, ಅದೇ ಆಧಾರದಲ್ಲಿ ಜಿಲ್ಲಾಡಳಿತ `ಭೂ ಕಂಪನ ನಡೆದಿಲ್ಲ’ ಎಂದು ಪ್ರಕಟಣೆ ಹೊರಡಿಸಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಭೂ ವಿಜ್ಞಾನ ಸಚಿವಾಲಯ ತನ್ನ ಅಧಿಕೃತ ವೆಬ್ಸೈಟಿನಲ್ಲಿ ಭೂ ಕಂಪನ ಆಗಿರುವುದನ್ನು ಖಚಿತಪಡಿಸಿದೆ.
ಇದನ್ನು ಓದಿ: ಭೂ ಅಧ್ಯಯನಕ್ಕೆ ವಿಜ್ಞಾನಿಗಳ ತಂಡ
ಸ್ಥಳಕ್ಕೆ ದೌಡಾಯಿಸಿದ ವಿಜ್ಞಾನಿಗಳ ತಂಡ
ಭೂ ಕಂಪನದ ಸುದ್ದಿ ಕೇಳಿದ ರಾಜ್ಯ ವಿಪತ್ತು ನಿರ್ವಹಣಾ ಘಟಕದ ವಿಜ್ಞಾನಿಗಳು ಸ್ಥಳ ಪರಿಶೀಲನೆಗಾಗಿ ಹೊರಟಿದ್ದಾರೆ. ಮಧ್ಯಾಹ್ನ 3 ಗಂಟೆ ವೇಳೆಗೆ ಅವರು ಶಿರಸಿ ತಲುಪುವ ಸಾಧ್ಯತೆಗಳಿವೆ. ಇಬ್ಬರು ವಿಜ್ಞಾನಿಗಳು ಈ ತಂಡದಲ್ಲಿದ್ದು, ಮುಂದಿನ ಸಾಧ್ಯತೆಗಳ ಬಗ್ಗೆ ಅವರು ಅಧ್ಯಯನ ನಡೆಸಲಿದ್ದಾರೆ.




