ಹಳಿಯಾಳ: ಪುಗ್ಗಿ ಊದಿಸುವ ಬರದಲ್ಲಿ ಉಸಿರನ್ನು ಒಳಗೆ ತೆಗೆದುಕೊಂಡ ಬಾಲಕನ ಗಂಟಲಿನಲ್ಲಿ ಬಲೂನು ಸಿಲುಕಿದ ಪರಿಣಾಮ ನವೀನ ಬೆಳಗಾಂವ್ಕರ್ (13) ಸಾವು ಕಂಡಿದ್ದಾರೆ.
ಜೋಗಿನಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುವ ನವೀನ ನಾರಾಯಣ ಬೆಳಗಾಂವಕರ (13) ಸೋಮವಾರ ಪುಗ್ಗಿ ಹಿಡಿದು ಆಡುತ್ತಿದ್ದರು. ಪುಗ್ಗಿಗೆ ಗಾಳಿ ತುಂಬಲು ಅದನ್ನು ಬಾಯಿ ಬಳಿ ಹಿಡಿದ ಅವರು ಗಾಳಿ ಹೊರ ಹಾಕುವ ಬದಲು ಒಳ ತೆಗೆದುಕೊಂಡರು. ಪರಿಣಾಮ ಕೈಯಲ್ಲಿದ್ದ ಪುಗ್ಗಿ ಗಂಟಲು ಸೇರಿತು.
ಪರಿಣಾಮ ಉಸಿರಾಡಲು ಸಾಧ್ಯವಾಗದೇ ನವೀನ್ ಒದ್ದಾಡುತ್ತಿದ್ದು, ಇದನ್ನು ನೋಡಿದ ಮನೆಯವರು ಗಂಟಲಿನಲ್ಲಿ ಸಿಲುಕಿದ ಪುಗ್ಗಿ ಹೊರತೆಗೆಯುವ ಪ್ರಯತ್ನ ಮಾಡಿದರು. ಮೂಗಿನಿಂದ ಆಗದಿದ್ದರೆ ಬಾಯಿಯಿಂದ ಉಸಿರಾಡುವಂತೆ ಸಲಹೆ ನೀಡಿದರು. ಆದರೆ, ಅದ್ಯಾವುದು ಸಾಧ್ಯವಾಗಲಿಲ್ಲ.
ಉಸಿರುಕಟ್ಟಿ ಒದ್ದಾಡುತ್ತಿದ್ದ ನವೀನರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿನ ವೈದ್ಯರು ಪುಗ್ಗಿ ಹೊರತೆಗೆದರು. ಆದರೆ, ನವೀನರನ್ನು ಬದುಕಿಸಿಕೊಳ್ಳಲು ಆಗಲಿಲ್ಲ.




