ಕುಮಟಾ: ಕಳೆದ ವರ್ಷ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ತಹಶೀಲ್ದಾರ್ ಕಚೇರಿಯಲ್ಲಿ ಲಿಪ್ಟ್ ವ್ಯವಸ್ಥೆ ಸರಿಯಾಗಿಲ್ಲ. ಕಳೆದ ಒಂದು ತಿಂಗಳಿನಿ0ದ ಇಲ್ಲಿನ ಲಿಪ್ಟ್ ಕೆಲಸ ಮಾಡುತ್ತಿಲ್ಲ.
ಸೋಮವಾರ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಸುಧಾಕರ ನಾಯ್ಕ, ಮಂಜುನಾಥ್ ಕಾಗಲ್ ಇದನ್ನು ಗಮನಿಸಿ ಅಲ್ಲಿದ್ದವರನ್ನು ಪ್ರಶ್ನಿಸಿದ್ದಾರೆ. `ಲಿಪ್ಟ್ ಹಾಳಾದ ಕಾರಣ ಅಂಗವಿಕಲರು ಹಾಗೂ ವೃದ್ಧರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರಿಗೆ ಮೆಟ್ಟಿಲು ಹತ್ತಿ ಮೇಲಿನ ಮಹಡಿಗೆ ತೆರಳಲು ಸಾಧ್ಯವಾಗುತ್ತಿಲ್ಲ’ ಎಂದವರು ವಿವರಿಸಿದ್ದಾರೆ.
`ಈ ಕಚೇರಿಯಲ್ಲಿ ತಹಶೀಲ್ದಾರ್ ಆಗಿ ಆಗಮಿಸಲು ಯಾರೂ ಆಸಕ್ತಿವಹಿಸುತ್ತಿಲ್ಲ. ಅಧಿಕಾರ ಸ್ವೀಕರಿಸಿದ ಕೆಲವೇ ದಿನದಲ್ಲಿ ವರ್ಗವಾಗುತ್ತಿದ್ದು, ಜನ ಸಾಮಾನ್ಯರ ಕೆಲಸಗಳಿಗೆ ತೊಂದರೆಯಾಗಿದೆ’ ಎಂದವರು ದೂರಿದರು. `ತಹಶೀಲ್ದಾರ್ ಕಚೇರಿ ಸಮಸ್ಯೆಗಳ ಬಗ್ಗೆ ಉಪವಿಭಾಗಾಧಿಕಾರಿಗಳಿಗೆ ತಿಳಿಸಲು ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದರೂ ಇಲ್ಲಿನ ಸಮಸ್ಯೆಗೆ ಪರಿಹಾರ ಕೊಡಬೇಕು’ ಎಂದವರು ಆಗ್ರಹಿಸಿದರು.




