`ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ 10 ಲಕ್ಷ ರೂ ಕೊಟ್ಟರೆ 4 ಎಕರೆ ಭೂಮಿ ಮಂಜೂರಿ ಮಾಡಿಕೊಡಲಾಗುತ್ತದೆ. 6 ಲಕ್ಷ ರೂ ಕೊಟ್ಟರೆ ಸರ್ಕಾರಿ ನೌಕರಿ ಕೊಡಿಸುತ್ತೇವೆ’ ಹೀಗೆ ಹೇಳಿ 17 ಜನರನ್ನು ವಂಚಿಸಿದ್ದ ಶಿರಸಿ ದಾಸನಕೊಪ್ಪದ ಬಸವರಾಜ ಪಾಟೀಲ್ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ನೇರವಾಗಿ ನೌಕರಿ ಕೊಡುವ ಯಾವುದೇ ಯೋಜನೆಗಳಿಲ್ಲ. ಕಾಸು ಕೊಟ್ಟು ಭೂಮಿ ಮಂಜೂರಿ ಮಾಡಿಕೊಡುವವರು ಇಲ್ಲಿಲ್ಲ. `ಮದ್ಯವರ್ತಿಗಳಿಂದ ದೂರವಿರಿ’ ಎಂಬ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಹಿಂದೆ ನಾಮಫಲಕ ಅಳವಡಿಸಲಾಗಿದ್ದು, ಅದು ಈಗಿಲ್ಲ. ಹೀಗಾಗಿ `ಕಾಸು ಕೊಟ್ಟು ಕೆಲಸ ಮಾಡಿಸಿಕೊಳ್ಳಬಹುದು’ ಎಂಬ ಭ್ರಮೆಯಲ್ಲಿ ಜನ ಮೋಸ ಹೋಗುತ್ತಿದ್ದಾರೆ.
ಕುಮಟಾ ಶಿರಗುಂಜಿಯ ಕುಪ್ಪು ಮಾಣಿ ಗೌಡ ಅವರು ಶಿರಗುಂಜಿಯಲ್ಲಿ 4 ಎಕರೆ ಭೂಮಿ ಉಳುಮೆ ಮಾಡುತ್ತಿದ್ದು, ಅದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಓಡಾಟ ನಡೆಸಿದ್ದರು. ಒಂದುವರೆ ವರ್ಷ ಓಡಾಡಿದರೂ ಅವರ ಕೆಲಸ ಆಗಿರಲಿಲ್ಲ. ಇದರೊಂದಿಗೆ ಅವರ ಮಗಳಿಗೆ ಯೋಗ್ಯ ಉದ್ಯೋಗದ ಹುಡುಕಾಟದಲ್ಲಿಯೂ ಇದ್ದರು. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಎದುರಾದ ಶಿರಸಿ ದಾಸನಕೊಪ್ಪದ ಬಸವರಾಜ ಪಾಟೀಲ ಈ ಎರಡು ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು.
`ನಾನು ಅನೇಕರಿಗೆ ಭೂಮಿ ಮಂಜೂರಿ ಮಾಡಿಸಿದ್ದೇನೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಕೆಲಸವನ್ನು ಮಾಡಿಸಿಕೊಟ್ಟಿದ್ದೇನೆ’ ಎಂದು ಬಸವರಾಜ ಪಾಟೀಲ್ ನಂಬಿಸಿದ್ದರು. `ಜಿಲ್ಲಾಧಿಕಾರಿಗಳು ತಮಗೆ ಪರಿಚಯ. ಅಲ್ಲಿನ ಸಿಬ್ಬಂದಿ ಸಹ ಆಪ್ತರು’ ಎಂದು ಹೇಳಿ ಭೂಮಿ ಮಂಜೂರಿಗೆ 10 ಲಕ್ಷ ರೂ ಹಣ ಪಡೆದಿದ್ದರು. ಉದ್ಯೋಗಕ್ಕಾಗಿ 6 ಲಕ್ಷ ರೂ ಪಡೆದಿದ್ದರು.
ಆದರೆ, ಬಸವರಾಜ ಪಾಟೀಲ ಕೊನೆಗೂ ಭೂಮಿ ಮಂಜೂರಿ ಮಾಡಿಕೊಡಲಿಲ್ಲ. ಕುಪ್ಪು ಗೌಡರ ಮಗಳಿಗೆ ಸರ್ಕಾರಿ ಕೆಲಸವನ್ನು ಕೊಡಿಸಲಿಲ್ಲ. ಪಡೆದ 16 ಲಕ್ಷ ರೂ ಹಣವನ್ನು ಮರಳಿಸಿಲ್ಲ. ಪದೇ ಪದೇ ಪ್ರಶ್ನಿಸಿದಾಗ ಜಿಲ್ಲಾಧಿಕಾರಿಗಳ ಸಹಿ ಹಾಗೂ ನೋಟರಿ ಮೊಹರು ಇರುವ ಕಾಗದವೊಂದನ್ನು ನೀಡಿದ್ದರು. ಸರ್ಕಾರಿ ಖಜಾನೆಗೆ ಹಣ ತುಂಬಿದ ರಸೀದಿಯೊಂದನ್ನು ಕೊಟ್ಟಿದ್ದರು. ಇದರ ಸತ್ಯಾಸತ್ಯತೆ ಬಗ್ಗೆ ಕುಪ್ಪು ಗೌಡರು ಎಲ್ಲಾ ಕಡೆ ವಿಚಾರಿಸಿದಾಗ ಇನ್ನೂ 16 ಜನರಿಗೆ ಇದೇ ರೀತಿ ಮೋಸ ಮಾಡಿರುವುದು ಗಮನಕ್ಕೆ ಬಂದಿತು.
ಈ ಹಿನ್ನಲೆ ಕುಪ್ಪು ಗೌಡ ಅವರು ಪೊಲೀಸ್ ಠಾಣೆಗೆ ತೆರಳಿ ತಮಗಾದ ಅನ್ಯಾಯದ ಬಗ್ಗೆ ಅಳಲು ತೋಡಿಕೊಂಡರು. ಮೋಸ ಮಾಡಿದ ಬಸವರಾಜ ಪಾಟೀಲ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು. ಪೊಲೀಸರು ಇದೀಗ ತನಿಖೆ ಶುರು ಮಾಡಿದ್ದಾರೆ.




