ಯಲ್ಲಾಪುರ: ಚಂದ್ಗುಳಿ ಗ್ರಾ ಪಂ ವ್ಯಾಪ್ತಿಯ ಕುಚಗಾಂವ್-ಕೊoಕಣಕೊಪ್ಪ ಮಾರ್ಗದ ಸೇತುವೆ ದಾಖಲೆಗಳ ಪ್ರಕಾರ ಪೂರ್ಣಗೊಂಡಿದೆ. ಆದರೆ, ಸಾರ್ವಜನಿಕರ ಉಪಯೋಗಕ್ಕೆ ಸಿಕ್ಕಿಲ್ಲ!
ಕುಚಗಾಂವ್’ನಿoದ ಕೊಂಕಣಕೊಪ್ಪ ಮಾರ್ಗವಾಗಿ ಸವಣಗೇರಿಗೆ ತೆರಳಲು 10 ಅಡಿ ಅಗಲದ ರಸ್ತೆಯಿದೆ. ಕೊಂಕಣಕೊಪ್ಪದ ಬಳಿ ಸಿಗುವ ಹಳ್ಳಕ್ಕೆ 10 ಅಡಿ ಅಗಲದ ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆಯಿದ್ದರೂ ಅಲ್ಲಿ 3 ಅಡಿ ಅಗಲದ ಸೇತುವೆ ನಿರ್ಮಿಸಲಾಗಿದೆ. ಅದಾಗಿಯೂ ಆ ಸೇತುವೆಗೆ ರಸ್ತೆ ಸಂಪರ್ಕ ಜೋಡಿಸುವ ಕೆಲಸ ನಡೆದಿಲ್ಲ. ಹೀಗಾಗಿ 2023ರ ಜನವರಿ 25ಕ್ಕೆ ಕಾಮಗಾರಿ ಮುಕ್ತಾಯವಾಗಿದ್ದರೂ ಸಾರ್ವಜನಿಕರಿಗೆ ಮಾತ್ರ ಈ ಸೇತುವೆಯಿಂದ ಕಿಂಚಿತ್ತು ಪ್ರಯೋಜನವಾಗಿಲ್ಲ.
ಆ ಭಾಗದ ರಸ್ತೆ ಜಿಲ್ಲಾ ಮುಖ್ಯ ರಸ್ತೆ ಎಂಬ ದಾಖಲೆಯಿದೆ. ಈ ಕಾಲು ಸಂಕ ನಿರ್ಮಾಣಕ್ಕೆ 15 ಲಕ್ಷ ರೂ ವೆಚ್ಚವಾಗಿದೆ. ಕಿರವತ್ತಿಯ ರಾಘವೇಂದ್ರ ಗೊಂದಿ ಎಂಬಾತರು ಗುತ್ತಿಗೆದಾರರು ನಾಲ್ಕು ತಿಂಗಳ ಅವಧಿಯಲ್ಲಿ ಈ ಕೆಲಸ ಮಾಡಿ ಮುಗಿಸಿದ್ದಾರೆ. ಆದರೆ, ಸೇತುವೆ ಹಾಗೂ ರಸ್ತೆಗೆ ಸಂಪರ್ಕ ಕಲ್ಪಿಸಲು ಮಾತ್ರ ಯಾರೂ ಮುಂದಾಗಿಲ್ಲ. ಹೀಗಾಗಿ ಈ ಭಾಗದಲ್ಲಿ ಓಡಾಡುವವರು ಕೊಂಕಣಕೊಪ್ಪ ಹಳ್ಳದ ಮೂಲಕವೇ ತೆರಳಿ ಊರು ಸೇರುತ್ತಾರೆ. ಮಳೆ ಬಂದಾಗ ಏಣಿ ಹಾಕಿ ಸೇತುವೆ ಮೇಲೆ ಓಡಾಡುತ್ತಾರೆ. ಹಳ್ಳದ ನೀರು ಹೆಚ್ಚಾದಾಗ ವಾಹನ ಸವಾರರು ಬೇರೆ ದಾರಿ ಹುಡುಕುತ್ತಾರೆ.
`ಕ್ರಿಯಾ ಯೋಜನೆ ಪ್ರಕಾರ ಕೆಲಸ ಮುಗಿಸಲಾಗಿದೆ. ದಾರಿ ಸಂಪರ್ಕ ಕೊಡುವ ಬಗ್ಗೆ ಕ್ರಿಯಾಯೋಜನೆಯಲ್ಲಿ ಇರಲಿಲ್ಲ. ಆ ಬಗ್ಗೆ ಲೋಕೋಪಯೋಗಿ ಇಲಾಖೆ ಗಮನಿಸಬೇಕು’ ಎಂದು ಗುತ್ತಿಗೆದಾರ ರಾಘವೇಂದ್ರ ಗೊಂದಿ ಪ್ರತಿಕ್ರಿಯಿಸಿದ್ದಾರೆ.
`10 ಅಡಿ ಅಗಲದ ಸೇತುವೆ ಆಗಿದ್ದರೆ ಮುಂಡಗೋಡು ಶಿರಸಿ ರಸ್ತೆ ಸಂಪರ್ಕ ಹತ್ತಿರವಾಗುತ್ತಿತ್ತು. 3 ಅಡಿ ಸೇತುವೆ ಕಾಮಗಾರಿಯೂ ಪೂರ್ಣವಾಗಿದ್ದರೆ ಬೈಕ್ ಓಡಾಟ-ಜನ ಸಂಚಾರಕ್ಕಾದರೂ ಅನುಕೂಲವಾಗುತ್ತಿತ್ತು. ಸರ್ಕಾರಿ ಹಣ ವೆಚ್ಚ ಮಾಡಿಯೂ ಸೇತುವೆ ಪೂರ್ಣವಾಗದ ಕಾರಣ ಊರಿನವರಿಗೆ ಯಾವುದೇ ಪ್ರಯೋಜನವಾಗಿಲ್ಲ’ ಎಂಬುದು ಇಲ್ಲಿನವರ ಅಳಲು.




