ಶಿರಸಿ: ಪಂಚ ಗ್ಯಾರಂಟಿ ಯೋಜನೆ ನೀಡಿರುವ ರಾಜ್ಯ ಸರ್ಕಾರ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಅದಾಗಿಯೂ, ಈ ಊರಿನ ಮಹಿಳೆಯರು ಕಾಸು ಕೊಟ್ಟು ಪ್ರಯಾಣ ಮಾಡುತ್ತಾರೆ!
ತೆರಕನಳ್ಳಿ-ಕುಳವೆ ಭಾಗಕ್ಕೆ ಇಷ್ಟು ವರ್ಷಗಳ ಕಾಲ ಬಸ್ ಸಂಪರ್ಕವೇ ಇರಲಿಲ್ಲ. ಇದರಿಂದ ಆ ಭಾಗದ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಈ ಹಿನ್ನಲೆ ಸೋಮವಾರ ಈ ಊರಿಗೆ ಹೊಸದಾಗಿ ಬಸ್ಸು ಬಿಡಲಾಗಿದೆ. ಮೊದಲ ಬಾರಿ ಈ ಊರಿಗೆ ಸರ್ಕಾರಿ ಬಸ್ಸು ಪ್ರವೇಶವಾಗಿದ್ದರಿಂದ ಜನ ಸಂತಸದಲ್ಲಿದ್ದಾರೆ. ಬಸ್ಸಿಗೆ ವಿಶೇಷ ಪೂಜೆ ಸಲ್ಲಿಸಿ ಊರಿನವರು ವಾಹನವನ್ನು ಬರಮಾಡಿಕೊಂಡರು.
ಇನ್ನೂ ಈ ಬಸ್ಸು ಸೇವೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕು ಅಂದರೆ ನಿಗಮಕ್ಕೆ ಆದಾಯವಾಗಬೇಕು. ಈ ಹಿನ್ನಲೆ ಊರಿನ ಮಹಿಳೆಯರು ತಿಂಗಳಿನಲ್ಲಿ 10 ದಿನವಾದರೂ ಕಾಸು ಕೊಟ್ಟು ಟಿಕೆಟ್ ಖರೀದಿಸಿಯೇ ಬಸ್ಸಿನಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದಾರೆ. `ಬಸ್ಸು ಓಡಾಟದಿಂದ ನಿಗಮಕ್ಕೆ ನಷ್ಟ ಆದರೆ ಬಸ್ಸು ಬಿಡುವುದಿಲ್ಲ. ಇದರಿಂದ ಮತ್ತೆ ವಿದ್ಯಾರ್ಥಿಗಳು ತೊಂದರೆಗೆ ಸಿಲುಕುತ್ತಾರೆ’ ಎಂದು ಮಹಿಳೆಯೊಬ್ಬರು ತಮ್ಮ ಕಳಕಳಿ ವ್ಯಕ್ತಪಡಿಸಿದರು. ಆಗ, ಅಲ್ಲಿದ್ದ ಅನೇಕರು ನಿಗಮಕ್ಕೆ ನಷ್ಟ ಆಗದಂತೆ ಬಸ್ಸು ಪ್ರಯಾಣ ಮಾಡುವುದಾಗಿ ಹೇಳಿದರು.
ಈ ಬಸ್ಸು ಮುದ್ದಿನಪಾಲ್, ಪಾಳದಬೈಲ್, ತೆರಕನಳ್ಳಿ, ಕುಳವೆ, ಕೊಪ್ಪ ಶಿಗೆಹಳ್ಳಿ ಮಾರ್ಗವಾಗಿ ನಾಣಿಕಟ್ಟಾಗೆ ಬಸ್ ಸಂಚರಿಸಲಿದೆ. ಪ್ರಸ್ತುತ ಮೊದಲ ದಿನ ಬಸ್ಸಿನ ತುಂಬ ಪ್ರಯಾಣಿಕರಿದ್ದರು. ಉತ್ತಮ ಆದಾಯವೂ ನಿಗಮಕ್ಕೆ ಸಿಕ್ಕಿದೆ.




