ಸಿದ್ದಾಪುರ: ಅಳ್ಳಿಮಕ್ಕಿಯ ನಾರಾಯಣ ನಾಯಕ ಅವರು ತಮ್ಮ ಮನೆಯಲ್ಲಿ ಚಿರತೆ ಚರ್ಮವನ್ನಿರಿಸಿಕೊಂಡಿದ್ದು, ಅರಣ್ಯ ಜಾಗೃತ ದಳದವರು ಅವರ ಮನೆ ಮೇಲೆ ದಾಳಿ ಮಾಡದರು. ಜೋಪಡಿ ಮನೆಯ ಅಟ್ಟದ ಮೇಲೆ ಅವರಿಗೆ ಚಿರತೆ ಚರ್ಮ ಸಿಕ್ಕಿತು. ಆದರೆ, ಚಿರತೆ ಚರ್ಮ ಸಂಗ್ರಹಿಸಿಟ್ಟುಕೊoಡಿದ್ದ ಆರೋಪಿ ನಾರಾಯಣ ನಾಯಕ ಸಿಗಲಿಲ್ಲ!
ಸಿದ್ದಾಪುರ ತಾಲೂಕಿನ ಕ್ಯಾದಗಿ ಬಳಿಯ ಅಳ್ಳಿಮಕ್ಕಿ ನಾರಾಯಣ ನಾಯಕ ಅವರ ಮನೆಯಲ್ಲಿ ಚಿರತೆ ಚರ್ಮ ಇರುವುದನ್ನು ವ್ಯಕ್ತಿಯೊಬ್ಬರು ನೋಡಿದ್ದರು. ಈ ಬಗ್ಗೆ ಅವರು ಅಲ್ಲಿಲ್ಲಿ ಹೇಳಿಕೊಂಡಿದ್ದು, ಅರಣ್ಯ ಕಚೇರಿಗೆ ಸುದ್ದಿ ಮುಟ್ಟಿತ್ತು. ಅದಾಗಿಯೂ ಜಾಗೃತ ದಳದ ಸಿಬ್ಬಂದಿ ರಹಸ್ಯ ಭೇಟಿ ನಡೆಸಿ ಅಲ್ಲಿ ಚಿರತೆ ಚರ್ಮವಿರುವುದನ್ನು ಖಚಿತಪಡಿಸಿಕೊಂಡಿದ್ದರು.
ಶನಿವಾರ ಅರಣ್ಯ ಜಾಗೃತದಳದ ಯಲ್ಲಪ್ಪ ನೇತ್ರತ್ವದ ತಂಡದವರು ನಾರಾಯಣ ನಾಯಕ ಅವರ ಮನೆ ಮೇಲೆ ದಾಳಿ ಮಾಡಿದರು. ಅಲ್ಲಿದ್ದ ಚಿರತೆ ಚರ್ಮವನ್ನು ವಶಕ್ಕೆ ಪಡೆದರು. ಅರಣ್ಯ ಸಿಬ್ಬಂದಿ ಬಹುಕಾಂತ ನಾಯಕ, ಪ್ರಶಾಂತ ನಾಯಕ, ಗುರುರಾಜ ಮಡಿವಾಳ, ಮಂಜುನಾಥ ಪಟಗಾರ, ಸತೀಶ ಗುಡೆಬಾಗಿ ಈ ಕಾರ್ಯಾಚರಣೆಯಲ್ಲಿದ್ದರು.
ಮನೆ ಮಾಲಕ ನಾರಾಯಣ ನಾಯಕ ತೋಟಕ್ಕೆ ಹೋಗಿದ್ದು, ಅಧಿಕಾರಿಗಳ ದಾಳಿ ಅರಿತು ಅಲ್ಲಿಂದಲೇ ಕಾಡಿನ ಹಾದಿ ಹಿಡಿದರು. ಆರೋಪಿ ನಾರಾಯಣ ನಾಯಕ ಅವರಿಗಾಗಿ ಅರಣ್ಯ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.




