ಕಾರವಾರ: ನಗೆ ಗ್ರಾಮದಲ್ಲಿರುವ ಉದ್ಬವಲಿಂಗ ಜಾತ್ರೆಯಲ್ಲಿ ಬರುವ ಅತಿಥಿಗಳಿಗೆ ಕೊಟ್ಟೆ ಇಡ್ಲಿ ಕೊಟ್ಟು ಉಪಚರಿಸುವುದು ವಾಡಿಕೆ. ವಿವಿಧ ಬಗೆಯ ರೂಪಕಗಳ `ಹಗರಣ’ ಇಲ್ಲಿನ ಕಲಾಕಾರರ ಪ್ರತಿಭೆ ಪ್ರದರ್ಶನದ ವೇದಿಕೆಯಾಗಿದೆ.
ಕಾರವಾರದ ಕುಗ್ರಾಮಗಳಲ್ಲಿ ಒಂದಾದ ನಗೆಯಲ್ಲಿ ತಲೆತಲಾಂತರಗಳಿoದ ವಿಶಿಷ್ಟ ಪದ್ಧತಿಯಲ್ಲಿ ಜಾತ್ರಾ ಮಹೋತ್ಸವ ಆಚರಿಸಲಾಗುತ್ತದೆ. ಜಾತ್ರೆ ನೆಪದಲ್ಲಿ ದೂರದೂರದ ಊರಿನಲ್ಲಿರುವ ಬಂಧು-ಬಳಗದವರು ಒಂದಾಗುತ್ತಾರೆ. ನಗೆ ಗ್ರಾಮದಲ್ಲಿರುವ ಉದ್ಬವ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಕೆಯಾಗುತ್ತದೆ. ವಿವಿಧ ಪ್ರಾಣಿಗಳ ರೂಪಕಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಈ ರೂಪಕಗಳ ಪ್ರದರ್ಶನಕ್ಕೆ `ಹಗರಣ’ ಎಂದು ಹೆಸರು.
ಈ ಜಾತ್ರೆಯಲ್ಲಿ ಹಗರಣಗಳು ಮಾತ್ರ ಮನರಂಜನೆಯ ವಸ್ತುವಲ್ಲ. ರಾತ್ರಿಯಿಡೀ ಯಕ್ಷಗಾನವನ್ನು ಸಹ ಆಡಿಸಲಾಗುತ್ತದೆ. ಬಗೆ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಬಾರಿಯ ಜಾತ್ರೆಯಲ್ಲಿ 3 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದು ಇನ್ನೊಂದು ವಿಶೇಷ.

ಜಾತ್ರಾ ಅವಧಿಯಲ್ಲಿ ಯಾರ ಮನೆಗೆ ತೆರಳಿದರೂ ಕೊಟ್ಟೆ ಇಡ್ಲಿ ಕೊಡುತ್ತಾರೆ. ಜೊತೆಗೆ ರುಚಿಕರವಾದ ಕೂರ್ಮಾ, ಊಟದ ವ್ಯವಸ್ಥೆ ಅಷ್ಟೇ ಅಚ್ಚುಕಟ್ಟು. ಶಿಕ್ಷಣ ಇಲಾಖೆ ಅಧಿಕಾರಿಗಳು, ಕೈಗಾ ಅಣು ವಿದ್ಯುತ್ ಘಟಕದ ವಿಜ್ಞಾನಿಗಳು, ಕೆಪಿಸಿ ನೌಕರರು ಸಹ ಇಲ್ಲಿ ಆಗಮಿಸಿ ಕೊಟ್ಟೆ ಇಡ್ಲಿ ಸವಿಯುತ್ತಾರೆ. ಜಿಲ್ಲಾಡಳಿತದ ಅಧಿಕಾರಿ-ಸಿಬ್ಬಂದಿ ಸಹ ಹಗರಣ ನೋಡುವುದಕ್ಕಾಗಿ ನಗೆ ಗ್ರಾಮಕ್ಕೆ ಆಗಮಿಸಿದ್ದು, ಜಾತ್ರೆಗೆ ಬಂದ ಅತಿಥಿಗಳಿಗೆ ಪ್ರತಿ ಮನೆಯವರು `ತಮ್ಮ ಮನೆಗೆ ಬಂದು ಆತಿಥ್ಯ ಸ್ವೀಕರಿಸಿ’ ಎಂದು ಆಮಂತ್ರಿಸುತ್ತಾರೆ.




