ದುಡಿಯುವ ಮಗ, ಬಾಣಂತನಕ್ಕೆ ಸಜ್ಜಾದ ಸೊಸೆ, ಹೊಸ ಮನೆ ನಿರ್ಮಾಣದ ಸಿದ್ಧತೆ, ಅಡಿಕೆ ಕೆಲಸದಿಂದ ಸಿಗುವ ಆದಾಯ.. `ನೆಮ್ಮದಿಯಿಂದ ಬದುಕಲು ಸದ್ಯಕ್ಕೆ ಇಷ್ಟು ಸಾಕು’ ಎಂದು ನಿಟ್ಟುಸಿರು ಬಿಟ್ಟಿದ್ದ ವೃದ್ಧೆ ಮಂಗಲಾ ಸಿದ್ದಿ ಅವರ ಬದುಕಿಗೆ ಬಡಿದಿದ್ದು ದೊಡ್ಡ ಸಿಡಿಲು.
ಬಾಲ್ಯದಿಂದಲೂ ಕಷ್ಟದಿಂದಲೇ ಜೀವನ ನಡೆಸಿದ್ದ ಮಂಗಲಾ ಸಿದ್ದಿ ಅವರು ಮಗ ಬೆಳೆದ ನಂತರ ಸ್ವಲ್ಪ ಸುಧಾರಿಸಿಕೊಂಡಿದ್ದರು. ಸಾಲ ಮಾಡಿ ಕಳೆದ ವರ್ಷ ಮಗನ ಮದುವೆ ಮಾಡಿದ್ದರು. ಆ ಸಾಲ ತೀರುವ ಮೊದಲೇ ಶುಕ್ರವಾರ ರಾತ್ರಿ ಬಡಿದ ಸಿಡಿಲು ಅವರ ಮಗನನ್ನು ಸಮಾಧಿ ಮಾಡಿದ್ದು, ಅವರ ಕನಸುಗಳೆಲ್ಲವೂ ನೆಲಸಮವಾಗಿದೆ.
ಹರೀಶ ಸಿದ್ದಿ ಹುಟ್ಟಿ ಮೂರೇ ತಿಂಗಳಿಗೆ ಅವರ ತಂದೆ ಲಕ್ಷ್ಮಣ ಸಿದ್ದಿ ಅಡಿಕೆ ಮರದಿಂದ ಬಿದ್ದು ಸಾವನಪ್ಪಿದ್ದರು. ಇದೀಗ ಹರೀಶರ ಪತ್ನಿ ಹಸುಗೂಸು ಹೇರುವ ಮೂರು ತಿಂಗಳ ಮೊದಲು ಹರೀಶ ಸಿದ್ದಿ ಸಿಡಿಲು ಬಡಿದು ಸಾವನಪ್ಪಿದ್ದಾರೆ. ಮನೆಯಲ್ಲಿ ಬಾಣಂತನದ ಸಡಗರದ ಅವಧಿಯಲ್ಲಿ ಪತಿ ಹಾಗೂ ಮಗನ ಸಾವು ಅನುಭವಿಸಿದ ಮಂಗಲಾ ಸಿದ್ದಿ ಅವರ ಬದುಕು ಮಾತ್ರ ಶೋಚನೀಯ. 26 ವರ್ಷಗಳ ಹಿಂದೆ ಪತಿ ಸಾವನಪ್ಪಿದಾಗ ಮಂಗಲಾ ಸಿದ್ದಿ ಅನುಭವಿಸಿದ ನೋವನ್ನು ಇದೀಗ ಅವರ ಸೊಸೆ ಪ್ರಮೀಳಾ ಸಿದ್ದಿ ಅನುಭವಿಸುತ್ತಿದ್ದಾರೆ. ಹರೀಶ ಸಿದ್ದಿ ಅವರ ಒಂದು ಸಾವು ಹಲವು ನೋವುಗಳಿಗೆ ಕಾರಣವಾಗಿದೆ.
ಅವರಿವರ ಮನೆ ಅಡಿಕೆ ಮರ ಏರಿ ಬದುಕುತ್ತಿದ್ದ ಲಕ್ಷ್ಮಣ ಸಿದ್ದಿ ಸಾವನಪ್ಪಿದ್ದಾಗ ಮೂರು ತಿಂಗಳ ಮಗುವನ್ನು ಸಾಕಲು ಮಂಗಲಾ ಸಿದ್ದಿ ಅನುಭವಿಸಿದ್ದು ಅಷ್ಟಿಷ್ಟಲ್ಲ. ವಾಸಕ್ಕೆ ಯೋಗ್ಯ ಮನೆಯೂ ಇಲ್ಲದ ಪರಿಸ್ಥಿತಿಯಲ್ಲಿ ಕೂಲಿ ಮಾಡಿ ಬದುಕು ಕಟ್ಟಿಕೊಂಡ ಮಂಗಲಾ ಸಿದ್ದಿ ಮಗ ಹರೀಶ ಸಿದ್ದಿಯನ್ನು ಓದಿಸಿದರು. ದೊಡ್ಡವನಾದ ಹರೀಶ ಸಿದ್ದಿ ಬೆಂಗಳೂರಿಗೆ ಹೋಗಿ ದುಡಿಮೆ ಶುರು ಮಾಡಿದಾಗ ಆತನನ್ನು ಪ್ರೋತ್ಸಾಹಿಸಿದರು. ಮನೆಗೆ ಮರಳಿದಾಗ ಬೇಸರಿಸಿಕೊಳ್ಳದೇ ಜೊತೆಗೆ ನಿಂತು ಕೃಷಿ ಕೆಲಸಗಳನ್ನು ಕಲಿಸಿದರು. ಹರೀಶ ಸಿದ್ದಿ ಸಹ ಅಡಿಕೆ ಮರ ಏರಲು ಶುರು ಮಾಡಿದಾಗ ಮರದಿಂದ ಬಿದ್ದ ಪತಿಯನ್ನು ನೆನಸಿಕೊಂಡು ಮಂಗಲಾ ಸಿದ್ದಿ ಕಳವಳ ವ್ಯಕ್ತಪಡಿಸಿದ್ದರು.
ಯಲ್ಲಾಪುರ ತಾಲೂಕಿನ ನಂದೂಳ್ಳಿ ಬಾಳೆಗದ್ದೆಯ ಹರೀಶ ಸಿದ್ದಿ ಬೆಂಗಳೂರು ತೊರೆದ ನಂತರ ಅರ್ದ ಎಕರೆ ಅತಿಕ್ರಮಣ ಜಾಗದಲ್ಲಿ ಗಿಡ ನೆಟ್ಟಿದ್ದರು. ಅಲ್ಲಿಯೇ ಜೇನು ಸಾಕಾಣಿಕೆ, ಅಡಿಕೆ ಕೆಲಸ, ಅವರಿವರ ಮನೆಯ ಕೂಲಿ ಹಾಗೂ ಕೊನೆಕೊಯ್ಲು ಮೂಲಕ ಬದುಕು ಕಟ್ಟಿಕೊಂಡಿದ್ದರು. ಕಳೆದ ವರ್ಷ ಮಂಚಿಕೆರೆ ಜಡಗಿನಕೊಪ್ಪದ ಪ್ರಮೀಳಾ ಅವರನ್ನು ವರಿಸಿದ್ದರು. ಅದ್ಧೂರಿಯಾಗಿ ಮದುವೆ ನಡೆದ ಜಾಗದಲ್ಲಿಯೇ ಮನೆ ನಿರ್ಮಾಣಕ್ಕೆ ನೆಲಸಮದಟ್ಟು ಮಾಡಿದ್ದರು. `ಒಳ್ಳೆಯ ಮನೆ ಕಟ್ಟೋಣ. ಹುಟ್ಟುವ ಕಂದಮ್ಮನ ಜೊತೆ ನೆಮ್ಮದಿಯ ಜೀವನ ನಡೆಸೋಣ’ ಎಂದು ಪತ್ನಿ ಹಾಗೂ ತಾಯಿ ಬಳಿ ಹರೀಶ ಸಿದ್ದಿ ಹೇಳಿಕೊಂಡಿದ್ದರು.
ಶುಕ್ರವಾರ ಸಂಜೆ ಹರೀಶ ಸಿದ್ದಿ ತಮ್ಮ ಸ್ನೇಹಿತರಿಗೆ ಫೋನ್ ಮಾಡಿ `ನಾಳೆ ಮೂವರು ಸೇರಿ ಭಟ್ಟರ ಮನೆಯ ಕೊನೆ ಕೊಯ್ಲು ಮಾಡೋಣ’ ಎಂದಿದ್ದರು. ಇನ್ನೂ ಕೆಲವರಿಗೆ ಫೋನ್ ಮಾಡಿ `ಭಾನುವಾರ ಕಬ್ಬಡ್ಡಿ ಆಡೋಣ’ ಎನ್ನುತ್ತಿದ್ದರು. ಕೆಲಸ ಮುಗಿಸಿ ಬಂದು ಅಂಗಳದಲ್ಲಿ ನಿಂತು ಫೋನಿನಲ್ಲಿ ಮಾತನಾಡುತ್ತಿರುವಾಗಲೇ ಸಿಡಿಲು ಬಡಿದು ಸಾವನಪ್ಪಿದರು.
ಇದನ್ನೂ ಓದಿ: ಸಿಡಲ ಆಘಾತಕ್ಕೆ ಸಮಾಧಿಯಾದ ಸಿದ್ದಿ ಪೋರ
ಹರೀಶ ಸಿದ್ದಿ ಸಿಡಿಲಿನ ಆಘಾತಕ್ಕೆ ಬಲಿಯಾಗಿದ್ದು ಆತನ ಸ್ನೇಹಿತ ಬಳಗದವರಿಗೆ ಗೊತ್ತಾಗಿಲ್ಲ. ಹೀಗಾಗಿ ಹರೀಶನನ್ನು ಮಾತನಾಡಿಸುವುದಕ್ಕಾಗಿ ಈಗಲೂ ಅನೇಕರು ಫೋನ್ ಮಾಡುತ್ತಿದ್ದಾರೆ. ಸಿಡಿಲ ಅಬ್ಬರಕ್ಕೆ ಹರೀಶ ಹಿಡಿದಿದ್ದ ಫೋನು ನುಚ್ಚು ನೂರಾಗಿದೆ. ಹರೀಶನೊಂದಿಗೆ ಮಾತನಾಡಬೇಕು ಎಂದು ಮನೆಗೆ ಫೋನು ಮಾಡುವವರಿಗೆ `ಹರೀಶ ಇನ್ನಿಲ್ಲ’ ಎನ್ನುವ ಬಿಕ್ಕಳಿಸುವ ಧ್ವನಿ ಕೇಳುತ್ತಿದೆ. ಇದರಿಂದ ಫೋನು ಮಾಡಿದವರು ಸಹ ಮೌನವಾಗುತ್ತಿದ್ದಾರೆ.
`ರಾತ್ರಿ 8ಗಂಟೆ ವೇಳೆಗೆ ದೊಡ್ಡ ಸಿಡಿಲು ಬಡಿಯಿತು. ಅಂಗಳದಲ್ಲಿ ನಿಂತು ಫೋನಿನಲ್ಲಿ ಮಾತನಾಡುತ್ತಿದ್ದ ಹರೀಶ ಸಿದ್ದಿ ಒಮ್ಮೆ ಕೂಗಿರುವುದು ಕೇಳಿಸಿತು. ನಂತರ ಮಾತು ಹೊರಡಲಿಲ್ಲ’ ಎಂದು ಸಿಡಿಲು ಬಡಿತವನ್ನು ಕಣ್ಣಾರೆ ಕಂಡ ಪ್ರಮೀಳಾ ಸಿದ್ದಿ ವಿವರಿಸಿದರು. `ಎಲ್ಲರೊಂದಿಗೂ ಹೊಂದಿಕೊoಡು ಹೋಗುವ ಹರೀಶ ಸಿದ್ದಿಗೆ ಸ್ನೇಹಿತರು ಅಪಾರ. ಉತ್ತಮ ಕ್ರೀಡಾಪಟು ಸಹ ಆಗಿದ್ದರು. ದುಡಿಯುವ ವಯಸ್ಸಿನಲ್ಲಿ ಹೀಗಾಗಬಾರದಿತ್ತು’ ಎಂದು ಅವರ ಆಪ್ತ ಅನಂತ ಸಿದ್ದಿ ನೋವು ತೋಡಿಕೊಂಡರು.




