ಹೊನ್ನಾವರ: ಭೂಮಿ ಸುತ್ತ ಹಾಕಿದ ಬೇಲಿ ತೆರವು ಮಾಡಿದ ಅರಣ್ಯಾಧಿಕಾರಿಗಳು ಬೇಲಿ ಒಳಗಿದ್ದ ಹಳೆಯ ತೆಂಗಿನ ಮರ ಸೇರಿ ಹಲವು 40ಕ್ಕೂ ಅಧಿಕ ತೆಂಗಿನ ಗಿಡ-ಮರಗಳನ್ನು ನಾಶ ಮಾಡಿದ್ದಾರೆ. ಹೊನ್ನಾವರದ ಚಿಕ್ಕನಗೋಡು ಬಳಿಯ ರಾಜು ನಾಯ್ಕ ಅವರಿಗೆ ಆದ ಅನ್ಯಾಯದ ವಿರುದ್ಧ ಅನೇಕರು ಸಿಡಿದೆದ್ದಿದ್ದಾರೆ.
40 ವರ್ಷಗಳ ಹಿಂದೆ ರಾಜು ನಾಯ್ಕ ಅವರು ಅರಣ್ಯ ಅತಿಕ್ರಮಣ ನಡೆಸಿ ಬದುಕು ಕಟ್ಟಿಕೊಂಡಿದ್ದರು. 5 ಎಕರೆ ಕ್ಷೇತ್ರದಲ್ಲಿ ಅವರು ತೆಂಗಿನ ಗಿಡ ನೆಟ್ಟಿದ್ದು, ಅವು ಫಸಲು ಕೊಡುತ್ತಿದ್ದವು. ಶನಿವಾರ ಅರಣ್ಯಾಧಿಕಾರಿಗಳು ಆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿದ್ದ ಗಿಡ-ಮರಗಳನ್ನು ನಾಶ ಮಾಡಿದರು. ವಿದ್ಯುತ್ ಬಿಲ್ ಪಾವತಿ ದಾಖಲೆ, ಭೂಮಿಯ ತೆರಿಗೆ ಪಾವತಿ ರಸೀದಿ, ಅರಣ್ಯ ಭೂಮಿ ಜಿಪಿಎಸ್ ಆದ ದೃಢೀಕರಣ ಒದಗಿಸಿದರೂ ಅರಣ್ಯ ಸಿಬ್ಬಂದಿ ಮಾತು ಕೇಳಲಿಲ್ಲ.
ಶುಕ್ರವಾರ ರಾಜು ನಾಯ್ಕ ಅವರನ್ನು ಸಹ ಅರಣ್ಯಾಧಿಕಾರಿಗಳು ಬಂಧಿಸಿದ್ದು, ಅರಣ್ಯ ಅಧಿಕಾರಿಗಳ ದುಷ್ಟನಡೆಯ ಬಗ್ಗೆ ಆಕ್ರೋಶಗಳು ವ್ಯಕ್ತವಾಗಿದೆ. ಅರಣ್ಯಾಧಿಕಾರಿಗಳ ದೌರ್ಜನ್ಯದ ಸತ್ಯ ಶೋಧನೆ ಸಮಿತಿಯು ಜಿಲ್ಲಾ ಸಂಚಾಲಕ ರಾಮ ಮರಾಠಿ ಎಲಕೊಟ್ಟಗಿ, ಮಹೇಶ ನಾಯ್ಕ ಸಾಲ್ಕೋಡ, ವಿನೋದ ನಾಯ್ಕ ನೇತೃತ್ವದ ತ್ರಿಸದ್ಯಸರ ಸಮಿತಿ ಸ್ಥಳಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸಿತು. ಈ ವೇಳೆ ಅರಣ್ಯಾಧಿಕಾರಿಗಳು ದೌರ್ಜನ್ಯ ಎಸಗಿರುವುದು ಕಂಡು ಬಂದಿದೆ.
`ಸಾಗುವಳಿ ಮಾಡಿದಂತ ಕ್ಷೇತ್ರದಲ್ಲಿ ಗೇರು, ತೆಂಗು, ಅಡಿಕೆ ಮರ ನಾಶ ಮಾಡಲಾಗಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಜಿಪಿಎಸ್ ಆದ ಕ್ಷೇತ್ರ ಅದಾಗಿದ್ದು, ಮನೆ ನಂ ಸಹ ಇದೆ. ಅದಾಗಿಯೂ ಈ ರೀತಿ ದೌರ್ಜನ್ಯ ಎಸಗಿದ್ದು ಖಂಡನೀಯ’ ಎಂದು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು.




