ಜೊಯಿಡಾ: ದಾಂಡೇಲಿ-ಜೊಯಿಡಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಬಸ್ ಪಲ್ಟಿಯಾದ ಪರಿಣಾಮ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಚಿತ್ರದುರ್ಗದ ಹೊಸದುರ್ಗಾ ಸೆಂಟ್ ಅಂತೋನಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶನಿವಾರ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ್ದರು. ಮೌಳಂಗಿ ಹೋಂ ಸ್ಟೇಯಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದ ಅವರೆಲ್ಲರೂ ಭಾನುವಾರ ಜಲ ಸಾಹಚ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಜಲ ಸಾಹಸ ಕ್ರೀಡೆ ಮುಗಿಸಿ ಹಿಂತಿರುಗುವ ವೇಳೆ ಭಾನುವಾರ ಮಧ್ಯಾಹ್ನ ಗಣೇಶಗುಡಿ ಬಳಿ ಬಸ್ ಪಲ್ಟಿಯಾಯಿತು.
ಈ ಬಸ್ಸಿನಲ್ಲಿ 60 ವಿದ್ಯಾರ್ಥಿಗಳಿದ್ದರು. ಅವರಲ್ಲಿ 40ಕ್ಕೂ ಅಧಿಕ ಜನ ಗಾಯಗೊಂಡರು. ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬಸ್ಸು ಗಟಾರದ ಕಡೆ ವಾಲಿದ್ದು, ವಿದ್ಯಾರ್ಥಿಗಳ ಜೊತೆಯಿದ್ದ ಶಿಕ್ಷಕರು ಪೆಟ್ಟು ಮಾಡಿಕೊಂಡರು. ಅಪಘಾತ ನಡೆದ ನಂತರ ಸ್ಥಳೀಯರು ಆಗಮಿಸಿ ಗಾಯಗೊಂಡವರಿಗೆ ನೆರವಾದರು. ಆಂಬುಲೆನ್ಸ್ ಹಾಗೂ ಖಾಸಗಿ ವಾಹನಗಳ ಮೂಲಕ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ನೊಂದವರಿಗೆ ಚಿಕಿತ್ಸೆ ಮುಂದುವರೆದಿದೆ.




