ಹೊನ್ನಾವರ: ಭೂಮಿ ಹಾಗೂ ಓಡಾಡುವ ರಸ್ತೆ ವಿಷಯವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಅಕ್ಕಪಕ್ಕ ಮನೆಯ ಎರಡು ಕುಟುಂಬದವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಎರಡೂ ಕಡೆಯವರು `ತಮಗೆ ನ್ಯಾಯ ಕೊಡಿಸಿ’ ಎಂದು ಪೊಲೀಸರ ಮೊರೆ ಹೋಗಿದ್ದಾರೆ.
ಹೊನ್ನಾವರದ ಮಂಕಿ ಬಳಿಯ ಖಾಜಿಮನೆ ಬಳಿಯಿರುವ ಸರ್ವೆ ನಂ 238ರ ಭೂ ಭಾಗ ಹೊಡೆದಾಟಕ್ಕೆ ಮೂಲ ಕಾರಣ. `ಈ ಆಸ್ತಿ ನಮ್ಮದಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ಇಲ್ಲಿ ರಸ್ತೆ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಅದಕ್ಕೆ ಅಡ್ಡಿಪಡಿಸಿ ನಮಗೆ ಹೊಡೆದಿದ್ದಾರೆ’ ಎಂಬುದು ಖಾಜಿಮನೆ ಸುಮಿತ್ರಾ ನಾಯ್ಕ ಅವರ ದೂರು.
ಡಿ 7ರ ಸಂಜೆ ರಸ್ತೆ ಕೆಲಸ ನಡೆಯುತ್ತಿದ್ದಾಗ ಅದನ್ನು ನೋಡಲು ಹೋದ ಸುಮಿತ್ರಾ ನಾಯ್ಕ ಹಾಗೂ ಅವರ ಗಂಡ ದುರ್ಗಯ್ಯ ನಾಯ್ಕ ಅವರ ಮೇಲೆ ಶಿವು ನಾಯ್ಕ, ಮನ್ನಿ ನಾಯ್ಕ, ಸುಚಿತ್ರಾ ನಾಯ್ಕ, ಅಣ್ಣಯ್ಯ ನಾಯ್ಕ, ವಿಷ್ಣು ನಾಯ್ಕ, ನೇತ್ರಾವತಿ ನಾಯ್ಕ, ನೀಲಾ ನಾಯ್ಕ ಹಾಗೂ ಸರಸ್ವತಿ ನಾಯ್ಕ ಸೇರಿ ಹಲ್ಲೆ ಮಾಡಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಇದರೊಂದಿಗೆ ಡಿ 8ರ ಬೆಳಗ್ಗೆ ಸುಮಿತ್ರಾ ನಾಯ್ಕ ಅವರ ಮನೆಗೂ ನುಗ್ಗಿದ ಸುಚಿತ್ರಾ ನಾಯ್ಕ ಹಾಗೂ ಶಿವು ನಾಯ್ಕ ಸೇರಿ ಸುಮಿತ್ರಾ ಅವರ ಬಟ್ಟೆ ಹರಿದಿದ್ದಾರೆ. ತಪ್ಪಿಸಲು ಬಂದ ಸುಮಿತ್ರಾ ಅವರ ಮಗಳು ಗೀತಾ ನಾಯ್ಕ ಅವರಿಗೆ ಮನ್ನಿ ನಾಯ್ಕ ಕಲ್ಲಿನಿಂದ ಹೊಡೆದು ಗಾಯಪಡಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಡಿ 8ರಂದು ಬೆಳಗ್ಗೆ ಹನುಮಂತ ನಾಯ್ಕ ಹೊಲದ ಕೆಲಸಕ್ಕೆ ಹೋದಾಗ ಅಲ್ಲಿಗೆ ತೆರಳಿದ ದುರ್ಗಯ್ಯ ನಾಯ್ಕ ಕಲ್ಲಿನಿಂದ ಹೊಡೆದು ಗಾಯ ಮಾಡಿದ್ದಾರೆ. ದುರ್ಗಯ್ಯ ನಾಯ್ಕ ಅವರ ಮಗಳು ಗೀತಾ ನಾಯ್ಕ, ಅಳಿಯ ಅಶೋಕ ನಾಯ್ಕ, ರಾಮ ನಾಯ್ಕ ಎಲ್ಲ ಸೇರಿ ಹನುಮಂತ ನಾಯ್ಕರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
ಅಲ್ಲಿದ್ದ ಬೇಲಿ ಗೂಟ ಮುರಿದು ಅದರಿಂದಲೂ ಹೊಡೆದಿದ್ದಾರೆ. `ತಾನು ಅಂಗವಿಕಲ ಎಂಬ ಅರಿವಿದ್ದರೂ ಕಾಲಿನಿಂದ ತುಳಿದು ನೋವು ಮಾಡಿದ್ದಾರೆ’ ಎಂದು ಹನುಮಂತ ನಾಯ್ಕ ಅವರು ದುರ್ಗಯ್ಯ ನಾಯ್ಕ, ಈಶ್ವರ ನಾಯ್ಕ, ಸುಮಿತ್ರಾ ನಾಯ್ಕ, ಗೀತಾ ನಾಯ್ಕ, ಅಶೋಕ ನಾಯ್ಕ ಹಾಗೂ ರಾಮಾ ನಾಯ್ಕ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.




