ಶಿರಸಿ: ಬೆಟ್ಟ-ಗುಡ್ಡಗಳ ನಡುವಿನ ಪುಟ್ಟ ಹಳ್ಳಿ ಬೆಟ್ಟಕೊಪ್ಪ. ಅಲ್ಲಿ ಭಾನುವಾರ ರಾತ್ರಿ ನಡೆದ `ನಮ್ಮನೆ ಹಬ್ಬ’ಕ್ಕೆ ಬಂದ ಗಣ್ಯರು ನೂರಾರು. ಸಂಗೀತ, ಸನ್ಮಾನ, ಯಕ್ಷ ರೂಪಕ ಸೇರಿ ವಿಶ್ವಶಾಂತಿಯ ಸಂದೇಶ ಸಾರುವ ವೈವಿಧ್ಯಮಯ ಕಾರ್ಯಕ್ರಮ ಕಣ್ತುಂಬಿಕೊoಡ ಜನ ಸಾವಿರಾರು.
ಭಾವದಲೆಯಲ್ಲಿ ತೇಲಿಸಿ ಕಣ್ಣೀರಾಕಿಸಿದ `ವಿಶ್ವಾಭಿಗಮನಮ್’ ಪ್ರೇಕ್ಷಕರಲ್ಲಿ ಕಣ್ಣೀರ ಹನಿ ಹಾಕಿಸಿತು. ಮುಂಗಾರು ಮಳೆ ಖ್ಯಾತಿಯ ಪೂಜಾ ಗಾಂಧಿ ತುಳಸಿ ಹೆಗಡೆ ಅವರ ಯಕ್ಷ ರೂಪಕ ನೋಡಿ ಭಾವುಕರಾದರು. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ರಚಿಸಿದ ಸಾಹಿತ್ಯದ ಈ ರೂಪಕ ಕೃಷ್ಣನ ಬಾಲ ಲೀಲೆಗಳು, ಮಾತೆ ಯಶೋಧೆಯ ತುಮುಲ, ಆಕೆ ಮಗನಲ್ಲಿ ಕಂಡ ವಿಶ್ವ ರೂಪ ದರ್ಶನ, ತಾಯಿ ಭಗವಂತನಲ್ಲಿ ಬೇಡಿಕೊಂಡ ಪರಿ, ವೃಂದಾವನ, ರಾಧೆ, ಪ್ರೇಮ, ವಿರಹ, ವಿಶ್ವದ ಅಭಿಗಮನವಾಗಿ ಹೊರಟ ಕೃಷ್ಣನನ್ನು ಪರಿಚಯಿಸಿತು. ಕೇಶವ ಹೆಗಡೆ ಕೊಳಗಿ ಧ್ವನಿಯಲ್ಲಿ ಅರಳಿದ ಈ ರೂಪಕಕ್ಕೆ ಹಿಮ್ಮೇಳದ ಮದ್ದಲೆಯಲ್ಲಿ ಶಂಕರ ಭಾಗವತ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸ್ರಕೊಪ್ಪ ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಪ್ರಸಾದನದಲ್ಲಿ ಸಂಜಯಕುಮಾರ ಬಿಳಿಯೂರ ನೆರವಾದರು.
`ತುಳಸಿಯ ನೃತ್ಯ, ಅಭಿನಯ ನೋಡಿದರೆ ಮಾತೇ ಬರುತ್ತಿಲ್ಲ. ಅಪರೂಪದ ಅನುಭವ ಕಟ್ಟಿಕೊಟ್ಟಿತು. ರೂಪಕವು ಕಣ್ಣಂಚು ಒದ್ದೆಯಾಗಿಸಿತು’ ಎಂದು ನಟಿ ಪೂಜಾ ಗಾಂಧಿ ಅನಿಸಿಕೆ ಹಂಚಿಕೊoಡರು. ಇದೇ ವೇದಿಕೆಯಲ್ಲಿ ಚಲನಚಿತ್ರ ಕಲಾವಿದ ನೀರ್ನಳ್ಳಿ ರಾಮಕೃಷ್ಣ, ಅವಿನಾಶಿ ಸಂಸ್ಥೆ ಸ್ಥಾಪಕ ಅಣ್ಣಾರಾಯ ತಳವಾರ ಹಾಗೂ ಯುವ ಗಾಯಕಿ ಐಶ್ವರ್ಯ ದೇಸಾಯಿ `ನಮ್ಮನೆ ಪ್ರಶಸ್ತಿ’ ಸ್ವೀಕರಿಸಿದರು.
ಪ್ರಸಿದ್ಧ ಗಾಯಕ ರವಿ ಮುರೂರು ಅವರು ಪ್ರೀತಿ ಪ್ರೇಮ ವಿರಹ ಗೀತೆ ಹಾಡುವ ಮೂಲಕ ಭಾವ ಲೋಕದಲ್ಲಿ ಸಂಚಲನ ಸೃಷ್ಠಿಸಿದರು. ಲೋಕದ ಕಣ್ಣಿಗೆ ರಾಧೆ… ಮಾತು ಕೊಟ್ಟ ರಾಧೆಗೆ ಪ್ರೀತಿ ಕೊಟ್ಟ…. ಸೇರಿದಂತೆ ಹತ್ತಾರು ಹಾಡುಗಳನ್ನು ಹಾಡಿದರು. ಇದಕ್ಕೆ ಗಣೇಶ ಗುಂಡ್ಕಲ್, ಸತೀಶ ಹೆಗ್ಗಾರ ಹಾರ್ಮೋನಿಯಂ ಸಾಥ್ ನೀಡಿದ್ದರು.
ತುಳಸಿ ಹೆಗಡೆ ಅವರು ಪ್ರಸ್ತುತಪಡಿಸಿದ ಯಕ್ಷ ರೂಪಕವನ್ನು ವಿ ಉಮಾಕಾಂತ ಭಟ್ಟ ನಿರ್ದೇಶಿಸಿದ್ದರು. ಹಿನ್ನೆಲೆ ಧ್ವನಿಯನ್ನು ಶ್ರೀಪಾದ ಭಟ್ಟ ಒದಗಿಸಿದ್ದರು. ಮೂಲ ಕಲ್ಪನೆಯನ್ನು ರಮೇಶ ಹಳೆಕಾನಗೋಡ ಹಾಗೂ ಗಾಯತ್ರಿ ರಾಘವೇಂದ್ರ ನೀಡಿದ್ದು, ನೃತ್ಯ ಸಲಹೆ ಕಲಗದ್ದೆ ವಿನಾಯಕ ಹೆಗಡೆ, ತಾಳಾಭ್ಯಾಸ ಎಸ್ ಜಿ ಭಟ್ಟ ಒದಗಿಸಿದ್ದರು. ಗಾಯತ್ರಿ ರಾಘವೇಂದ್ರ ನಿರ್ವಹಿಸಿದರು. ಉದಯ ಪೂಜಾರಿ ಧ್ವನಿ ಗ್ರಹಣ ನೀಡಿದ್ದರು.
ವಿಶ್ವಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷರಾಗಿರುವ ಹಿರಿಯ ಪರ್ತಕರ್ತ ರವೀಂದ್ರ ಭಟ್ಟ, ಶಾಸಕ ಭೀಮಣ್ಣ ನಾಯ್ಕ, ಪ್ರಮುಖರಾದ ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ, ವಿನಾಯಕ ಕೋಡ್ಸರ, ವಿನಯ ಹೊಸ್ತೋಟ, ನಾರಾಯಣ ಭಾಗ್ವತ, ರಮೇಶ ಹಳೆಕಾನಗೋಡ, ಕೇಶವ ಹೆಗಡೆ ಕೊಳಗಿ ಸೇರಿದಂತೆ ಸಾವಿರಾರು ಜನ ಈ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು.




