ಶಿರಸಿ: ಹೋರಾಟ ಶುರುವಾಗಿ 33 ವರ್ಷ ಕಳೆದರೂ ಅರಣ್ಯ ಅತಿಕ್ರಮಣದಾರರ ಅಳಲು ಆಲಿಸದ ಸರ್ಕಾರ ಇದೀಗ ದಿಢೀರ್ ಆಗಿ ಅರ್ಜಿ ವಿಲೇವಾರಿಗೆ ಗಡುವು ನೀಡಿದೆ. ಎರಡು ತಿಂಗಳ ಒಳಗಾಗಿ ಎಲ್ಲಾ ಅರ್ಜಿಗಳ ಪುನರ್ ಪರಿಶೀಲನೆ ನಡೆಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಬಾಕಿ ಇರುವ ಅರ್ಜಿಗಳ ವಿಲೇವಾರಿ ಹಾಗೂ ಪುನರ್ ಪರೀಶೀಲನೆ ಎರಡು ತಿಂಗಳಿನಲ್ಲಿ ಸಾಧ್ಯವೇ? ಎಂಬುದು ಈಗಿನ ಬಹುದೊಡ್ಡ ಪ್ರಶ್ನೆ. ಲಕ್ಷ ಸಂಖ್ಯೆಯಲ್ಲಿರುವ ಅರ್ಜಿಗಳನ್ನು 60 ದಿನದ ಅವಧಿಯಲ್ಲಿ ಸಮಗ್ರ ಪರಿಶೀಲನೆ ನಡೆಸುವುದು ಕಷ್ಟ ಎಂಬುದು ಬಹುತೇಕರ ಅಭಿಪ್ರಾಯ. ಈ ತರಾತುರಿಯ ನಿರ್ಧಾರದಿಂದ ಅರಣ್ಯ ಅತಿಕ್ರಮಣದಾರರಿಗೆ ಭೂಮಿಯ ಹಕ್ಕಿನ ಬದಲು ಪಟ್ಟಾ ತಿರಸ್ಕಾರ ಸಾಧ್ಯತೆಗಳೇ ಹೆಚ್ಚಿರುವ ಹಾಗೇ ಭಾಸವಾಗುತ್ತಿದೆ.
ನವೆಂಬರ್ 28ರಂದು ರಾಜ್ಯ ಮಟ್ಟದ ಅರಣ್ಯ ಹಕ್ಕು ಅನುಷ್ಠಾನ ಮೇಲ್ವೀಚಾರಣಾ ಸಮಿತಿ ಸಭೆ ನಡೆದಿದ್ದು, ಸಭಾ ನಡಾವಳಿ ಪ್ರಕಾರ ಪರಿಶಿಷ್ಠ ಪಂಗಡಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ರಂದೀಪ ಡಿ ಅವರು `60 ದಿನದಲ್ಲಿ ಅರ್ಜಿ ವಿಲೇವಾರಿ’ಯ ಆದೇಶ ಪ್ರಕಟಿಸಿದ್ದಾರೆ. ಎರಡು ತಿಂಗಳ ಕಾಲಮಾನ ನಿಗಧಿಗೊಳಿಸಿ ರಾಜ್ಯ ಮಟ್ಟದ ಅರಣ್ಯ ಹಕ್ಕು ಅನುಷ್ಟಾನ ಮೇಲ್ವೀಚಾರಣಾ ಸಮಿತಿ ವಿವಿಧ ಅರಣ್ಯ ಹಕ್ಕು ಸಮಿತಿಗೆ ನಿರ್ದೇಶನವನ್ನು ರವಾನಿಸಿದೆ.
ಸಭೆಯ ಮೇಲೆ ಮತ್ತೊಂದು ಸಭೆ!
`ಪ್ರತಿ ವಾರಕ್ಕೊಮ್ಮೆ ಗ್ರಾಮ ಅರಣ್ಯ ಸಮಿತಿ ಸಭೆ ನಡೆಸಬೇಕು. ಪ್ರತಿ 15 ದಿನಕ್ಕೋಮ್ಮೆ ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆ ಹಾಗೂ ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆ ಜರುಗಿಸಿ ತ್ವರಿತಗತಿಯಲ್ಲಿ ಈ ಅರ್ಜಿಗಳ ವಿಲೇವಾರಿ ಮಾಡಬೇಕು’ ಎಂದು ಸೂಚಿಸಲಾಗಿದೆ.
ಮುಖ್ಯಮಂತ್ರಿ ಸೂಚನೆಯಿಂದ ಈ ಕ್ರಮ
ಈಚೆಗೆ ಹೋರಾಟಗಾರ ರವೀಂದ್ರ ನಾಯ್ಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅರಣ್ಯ ಹಕ್ಕು ಹೋರಾಟ ಹಾಗೂ ಸಮಸ್ಯೆ ಬಗ್ಗೆ 25 ನಿಮಿಷ ಚರ್ಚೆ ನಡೆಸಿದ್ದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಹ ಶಿರಸಿಗೆ ಬಂದಾಗ ಈ ವಿಷಯದ ಬಗ್ಗೆ ಮಾಹಿತಿ ಪಡೆದಿದ್ದರು. 60 ಸಾವಿರಕ್ಕೂ ಅಧಿಕ ಅರ್ಜಿ ತಿರಸ್ಕಾರವಾಗಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿ, ಈ ಬಗ್ಗೆ ತ್ವರಿತ ಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಸಚಿವರು ಸೂಚಿಸಿದ್ದರು. ಈ ಹಿನ್ನಲೆ ಇದೀಗ ಅಧಿಕಾರಿಗಳು ಯಾವುದೇ ಅಧ್ಯಯನ ನಡೆಸದೇ, ನೈಜ ಸಮಸ್ಯೆಯನ್ನು ಸಹ ಪರಿಗಣಿಸದೇ ಏಕಾಏಕಿ ಎರಡು ತಿಂಗಳ ಗಡುವು ನೀಡಿ ಅರ್ಜಿ ವಿಲೇವಾರಿಗೆ ಆದೇಶ ಹೊರಡಿಸಿದ್ದಾರೆ.
ಅರಣ್ಯ ಸಿಬ್ಬಂದ ನಡೆಗೆ ಖಂಡನೆ-ಸಭೆ
ಹೊನ್ನಾವರ ತಾಲೂಕಿನ ಚಿಕ್ಕನಕೋಡ ಬಳಿಯ ಕೆಂಚಗಾರಿನಲ್ಲಿ ರಾಜು ತಿಪ್ಪಯ್ಯ ನಾಯ್ಕ ಆವರ ಮೇಲೆ ಅರಣ್ಯ ಸಿಬ್ಬಂದಿ ದೌರ್ಜನ್ಯದ ಹಿನ್ನಲೆ ಅರಣ್ಯ ಹಕ್ಕು ಹೋರಾಟಗಾರರು ಡಿ 11ರಂದು ಪೊಲೀಸ್ ಠಾಣೆಗೆ ತೆರಳಿ ಮಾತುಕಥೆ ನಡೆಸಲಿದ್ದಾರೆ. ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹಾಗೂ ಜಿಲ್ಲಾ ಸಂಚಾಲಕ ರಾಮ ಮರಾಠಿ ಪೊಲೀಸ್ ಠಾಣೆಗೆ ತೆರಳಲಿದ್ದಾರೆ.
ಸಿದ್ದಾಪುರದಲ್ಲಿಯೂ ಪ್ರತಿಭಟನೆ-ಮನವಿ
`ಅರಣ್ಯವಾಸಿ ರಾಜು ತಿಪ್ಪಯ್ಯ ನಾಯ್ಕ ಅವರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಡಿಸೆಂಬರ್ 11ರ ಬೆಳಗ್ಗೆ 11 ಗಂಟೆಗೆ ಸಿದ್ದಾಪುರದ ಅರಣ್ಯವಾಸಿಗಳು ಪ್ರತಿಭಟಿಸಿ, ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ’ ಎಂದು ಸಂಘಟನೆ ಸಂಯೋಜಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ತಿಳಿಸಿದ್ದಾರೆ.




