ಕಾರವಾರ: ನಗರದಲ್ಲಿನ ಅಕ್ರಮ ಕಟ್ಟಡಗಳಿಂದ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ವಿರುದ್ಧ ಜಯ ಕರ್ನಾಟಕ ಜನಪರ ವೇದಿಕೆ ಸಿಡಿದೆದ್ದಿದೆ. ಎರಡು ಬಾರಿ ಎಚ್ಚರಿಕೆ ನೀಡಿದರೂ ಕ್ರಮ ಜರುಗಿಸದ ಕಾರಣ ಕಾನೂನು ಹೋರಾಟ ನಡೆಸುವ ಬಗ್ಗೆ ಇನ್ನೊಮ್ಮೆ ಎಚ್ಚರಿಕೆ ನೀಡಿದೆ.
`ಕಟ್ಟಡ ದುರಸ್ಥಿ ನೆಪದಲ್ಲಿ ನಗರಸಭೆ ಪರವಾನಿಗೆ ಪಡೆದು ಅಕ್ರಮವಾಗಿ ಹೊಸ ಕಟ್ಟಡ ನಿರ್ಮಿಸುವವರ ಸಂಖ್ಯೆ ಹೆಚ್ಚಾಗಿದೆ. ಪಾದಚಾರಿಗಳು ಓಡಾಡುವ ಮಾರ್ಗ, ಚರಂಡಿ ಅತಿಕ್ರಮಿಸಿ ಕಟ್ಟಡ ನಿರ್ಮಿಸುತ್ತಿದ್ದು, ಇದರಿಂದ ಅನೇಕರಿಗೆ ಸಮಸ್ಯೆಯಾಗುತ್ತಿದೆ. ಆಯುಷ್ ಆಸ್ಪತ್ರೆ ಮುಂದಿನ ಪಿಕಳೆ ರಸ್ತೆ ತಿರುವಿನ ಸರ್ವೇ ನಂ 607ರಲ್ಲಿ ಅಕ್ರಮ ಕಟ್ಟಡ ನಿರ್ಮಿಸುತ್ತಿರುವುದರಿಂದ ಅಪಘಾತದ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಎರಡು ಬಾರಿ ದೂರು ನೀಡಿದರೂ ಕ್ರಮವಾಗಿಲ್ಲ’ ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ದಿಲೀಪ ಅರ್ಗೇಕರ್ ಅಸಮಧಾನ ವ್ಯಕ್ತಪಡಿಸಿದರು.
`ಈ ಹಿಂದೆ ಪತ್ರ ನೀಡಿದಾಗ 10 ದಿನದ ಒಳಗೆ ಅಕ್ರಮ ಕಟ್ಟಡ ತೆರವು ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರು. ಅದಾದ ನಂತರ ಕಟ್ಟಡ ದುರಸ್ಥಿಗೆ ಅನುಮತಿ ಪಡೆದ ಬಗ್ಗೆ ತಿಳಿಸಲಾಗಿದ್ದು, ಈ ಹಿಂದೆ ಕಟ್ಟಡವೇ ಇಲ್ಲದ ಜಾಗದಲ್ಲಿ ಕಟ್ಟಡ ದುರಸ್ಥಿ ಹೆಸರಿನಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ತಿರುವಿನಲ್ಲಿ ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತಿರುವುದರಿಂದ ದೊಡ್ಡ ವಾಹನಗಳ ಓಡಾಟಕ್ಕೆ ಅಡಚಣೆಯಾಗಿದೆ. ಅಪಾಯದ ಸಾಧ್ಯತೆಯೂ ಹೆಚ್ಚಿದೆ’ ಎಂದು ಸಂಘಟನೆಯ ರೋಷನ್ ಹರಿಕಂತ್ರ ಹಾಗೂ ಸುದೇಶ ನಾಯ್ಕ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರ ಬಳಿ ದೂರಿದರು.
`ಈ ಕಟ್ಟಡ ಕಾರವಾರ ಕೋಡಿಭಾಗಕ್ಕೆ ಹೋಗುವ ಮುಖ್ಯ ರಸ್ತೆಗೆ ಹೊಂದಿಕೊoಡಿದೆ. ಜನ ಸಾಮಾನ್ಯರು ಸಣ್ಣ ಮನೆ ನಿರ್ಮಿಸಿದರೂ ತೊಂದರೆ ಕೊಡುವ ಅಧಿಕಾರಿಗಳು ದೊಡ್ಡ ಕಟ್ಟಡದವರು ಅತಿಕ್ರಮಣ ಮಾಡಿದರೂ ಅವರ ತಂಟೆಗೆ ಹೋಗುತ್ತಿಲ್ಲ. ಸರ್ಕಾರಿ ನಿಯಮಗಳನ್ನು ಪಾಲಿಸದವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಪ್ರಮುಖರಾದ ಸುನಿಲ್ ತಾಂಡೇಲ್, ನಂದೇಶ್ ಮಾಜಾಳಿಕರ್ ಹಾಗೂ ದಿಲೀಪ್ ನಾಗೇಕರ್ ವಿವರಿಸಿದರು.
`ಅಕ್ರಮ ನಡೆಸಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು. ಅಕ್ರಮ ಕಟ್ಟಡವನ್ನು ತೆರವು ಮಾಡಬೇಕು. ಇಲ್ಲವಾದಲ್ಲಿ ನಾವೆಲ್ಲರೂ ಜಿಲ್ಲಾಧಿಕಾರಿ ಕಚೇರಿ ಹಾಗೂ ನಗರಸಭೆ ಎದುರು ಪ್ರತಿಭಟಿಸುವುದು ಅನಿವಾರ್ಯ’ ಎಂದು ಸಂಘಟನೆ ತಾಲೂಕು ಅಧ್ಯಕ್ಷ ಮೋಹನ ಉಳ್ವೇಕರ್, ಪದಾಧಿಕಾರಿಗಳಾದ ವಿನಯ್ ನಾಯ್ಕ, ಕಾರ್ತಿಕ್ ಹರಿಕಂತ್ರ, ಗಜಾನನ ಗುನಗಿ, ಶ್ರೀನಿವಾಸ್ ಹರಿಕಂತ್ರ ಎಚ್ಚರಿಸಿದರು.
ಈ ಬಗ್ಗೆ ನಗರಸಭೆ ಪೌರಾಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಸಲ್ಲಿಸಿದರು.




