ಕುಮಟಾ: ಅಘನಾಶಿನಿ ನದಿಗೆ ಅಡ್ಡವಾಗಿ ದೋಣಿಗುಂಡಿ ಬಳಿ ಸೇತುವೆ ನಿರ್ಮಿಸಲು ಶಾಸಕ ದಿನಕರ ಶೆಟ್ಟಿ ಅಲೆದಾಟ ನಡೆಸಿದ್ದಾರೆ. ಸೇತುವೆ ಜೊತೆಗೆ ಇಲ್ಲಿ ಬಾಂದಾರನ್ನು ಕಟ್ಟಿದರೆ `ಭವಿಷ್ಯದಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಾಧ್ಯ’ ಎಂಬ ನಿಲುವಿನಲ್ಲಿ ಶಾಸಕರಿದ್ದಾರೆ.
ಸಾಂತಗಲ್ ಬಳಿಯಲ್ಲಿರುವ ನಡುಗಡ್ಡೆ ಜನರ ಓಡಾಟಕ್ಕೆ ಈವರೆಗೂ ರಸ್ತೆಯಿಲ್ಲ. ಅಲ್ಲಿನವರು ಪಟ್ಟಣಕ್ಕೆ ಬರಬೇಕು ಅಂದರೆ ಅಘನಾಶಿನಿ ನದಿಯ ದೋಣಿಗೆ ಹುಟ್ಟು ಹಾಕಬೇಕು. ಕವಲೋಡಿ ಹಾಗೂ ಕಣಕಳಲೆ ಗ್ರಾಮದ ಜನ ತಮಗೊಂದು ಸೇತುವೆ ನಿರ್ಮಿಸಿಕೊಡಿ ಎಂದು ಮೊದಲಿನಿಂದಲೂ ಬೇಡುತ್ತಿದ್ದಾರೆ. ಈ ಹಿನ್ನಲೆ ಶಾಸಕ ದಿನಕರ ಶೆಟ್ಟಿ ಮಂಗಳವಾರ ಆ ಪ್ರದೇಶಕ್ಕೆ ಭೇಟಿ ನೀಡಿ ಸೇತುವೆ ನಿರ್ಮಾಣದ ಕನಸು ಕಂಡರು.
ಕವಲೋಡಿ ಹಾಗೂ ಕಣಕಳಲೆ ಗ್ರಾಮದ ಜನರ ಸಮಸ್ಯೆ ಬಗೆಹರಿಸಲು ದೋಣಿಗುಂಡಿ ಬಳಿ ಸೇತುವೆ ಅಗತ್ಯ. ಇದರೊಂದಿಗೆ ಸಮುದ್ರ ಸೇರುವ ನೀರನ್ನು ತಡೆದು ಶೇಖರಿಸಿಕೊಂಡಲ್ಲಿ ಕುಡಿಯುವ ನೀರಿನ ಯೋಜನೆಗೂ ಅನುಕೂಲ. ದೋಣಿಗುಂಡಿ ಬಳಿ ಸೇತುವೆ ಜೊತೆಗೆ ಬಾಂದಾರ್ ನಿರ್ಮಿಸಿದರೆ ಎರಡು ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದು ಶಾಸಕರ ಚಿಂತನೆ.
ಬಗ್ಗೋಣ ಬಳಿಯ ಮೊವತ್ತುಗುಂಡಿ ಸಹ ಇಂಥಹುದೇ ಪರಿಸ್ಥಿತಿಯಲ್ಲಿತ್ತು. ಆ ವೇಳೆ ದಿನಕರ ಶೆಟ್ಟಿ ಓಡಾಟ ನಡೆಸಿ ಸೇತುವೆ ಜೊತೆ ಬಾಂದಾರ್ ಮಂಜೂರಿ ಮಾಡಿಸಿದ್ದರು. ಬಿಜೆಪಿ ಸರ್ಕಾರ ಬಿದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹಿನ್ನಲೆ ಆ ಕೆಲಸ ಆಗಿರಲಿಲ್ಲ. ಅದಾಗಿಯೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಕಾಡಿದ ದಿನಕರ ಶೆಟ್ಟಿ ಈ ಮುವತ್ತುಗುಂಡಿ ಬಾಂದಾರ್ ಹಾಗೂ ಸೇತುವೆ ಕೆಲಸ ಪೂರ್ಣಗೊಳಿಸುವ ಕೆಲಸದಲ್ಲಿದ್ದಾರೆ. ದೋಣಿಗುಂಡಿ ಪರಿಸ್ಥಿತಿ ಸಹ ಹಾಗೇ ಇರುವುದರಿಂದ ಇಲ್ಲಿಯೂ ಸೇತುವೆ ಹಾಗೂ ಬಾಂದರ್ ಒಟ್ಟಿಗೆ ಆದರೆ ಅನುಕೂಲ ಎಂಬುದು ಶಾಸಕರ ಅಭಿಪ್ರಾಯ.




