ಭಟ್ಕಳ: `ಸುರಕ್ಷತೆ ಇಲ್ಲದೇ ಪ್ರವಾಸೋದ್ಯಮ ಚಟುವಟಿಕೆ ನಡೆಸಬೇಡಿ’ ಎಂದು ಖಾಸಗಿ ಪ್ರವಾಸೋದ್ಯಮಿಗಳಿಗೆ ಸೂಚಿಸಿರುವ ಪ್ರವಾಸೋದ್ಯಮ ಇಲಾಖೆ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲಿಯೇ ಸುರಕ್ಷತೆಗೆ ಆದ್ಯತೆ ಕೊಟ್ಟಿಲ್ಲ.
ಮಂಗಳವಾರ ಮುರುಡೇಶ್ವರ ಪ್ರವಾಸಕ್ಕೆ ಬಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ನೀರು ಪಾಲಾಗಿದ್ದು, ಒಬ್ಬರ ಶವ ಪತ್ತೆಯಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದು ಅವರ ಹುಡುಕಾಟ ನಡೆಯುತ್ತಿದೆ. ಅಲೆಗಳ ಅಬ್ಬರದೊಂದಿಗೆ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಒಟ್ಟು 46 ವಿದ್ಯಾರ್ಥಿಗಳು ಮಂಗಳವಾರ ಸಂಜೆ ಮುರುಡೇಶ್ವರಕ್ಕೆ ಬಂದಿದ್ದರು. ದೇವಾಲಯಕ್ಕೆ ತೆರಳಿದ ಅವರು ದೇವರ ದರ್ಶನ ಮಾಡಿ ಸಮುದ್ರಕ್ಕೆ ಇಳಿದಿದ್ದರು. ಅಲೆಗಳ ಅಬ್ಬರಕ್ಕೆ ಮೂವರು ಕೊಚ್ಚಿ ಹೋಗಿದ್ದು, ಇಬ್ಬರನ್ನು ಮೀನುಗಾರರು ರಕ್ಷಿಸಿದರು. ಒಬ್ಬರು ನೀರು ಕುಡಿದು ಸಾವನಪ್ಪಿದರು. ಇನ್ನು ಕೆಲವರು ನೀರುಪಾಲಾಗಿರುವ ಅನುಮಾನಗಳಿವೆ. ಮೂವರು ಕಣ್ಮರೆಯಾಗಿರುವುದು ಖಚಿತವಾಗಿದ್ದು, ಅವರೆಲ್ಲರ ಹುಡುಕಾಟ ಮುಂದುವರೆದಿದೆ.
ಸರ್ಕಾರದ ಬಳಿ ರಕ್ಷಣೆಗೆ ಸಿಬ್ಬಂದಿ ಇಲ್ಲ. ಇರುವ ಸಿಬ್ಬಂದಿಗೆ ಸಲಕರಣೆಗಳನ್ನು ನೀಡಿಲ್ಲ. ಈ ಮೊದಲು ಖಾಸಗಿಯವರು ಇಲ್ಲಿ ಜಲ ಸಾಹಸ ಚಟುವಟಿಕೆ ನಡೆಸುತ್ತಿದ್ದು, ತುರ್ತು ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ರಕ್ಷಣೆಗೆ ಬರುತ್ತಿದ್ದರು. ಆದರೆ, ಇದೀಗ ಖಾಸಗಿಯವರಿಗೆ ಸಹ ಚಟುವಟಿಕೆ ನಡೆಸಲು ಸೂಕ್ತ ಅನುಮತಿ ಸಿಕ್ಕಿಲ್ಲ.




