ಕಾರವಾರ: ಮಲ್ಲಾಪುರದಲ್ಲಿರುವ ಕೈಗಾ ಟೌನ್ಶಿಪ್’ನಲ್ಲಿ ಕಳ್ಳತನ ನಡೆದಿದೆ. ಸಾಕಷ್ಟು ಭದ್ರತೆಯಿರುವ ಪ್ರದೇಶದೊಳಗೆ ನುಸುಳಿದ ಕಳ್ಳರು ಮನೆ ಬೀಗ ಒಡೆದು ಚಿನ್ನಾಭರಣ ದೋಚಿದ್ದಾರೆ.
ಕೈಗಾ ಅಣು ಘಟಕದ ಉದ್ಯೋಗಿ ಉತ್ತರಕುಮಾರ ಅವರು ತಮ್ಮ ಊರಾದ ಬಿಹಾರಕ್ಕೆ ಹೋಗಿದ್ದರು. ಊರಿಗೆ ಹೋಗುವ ಮುನ್ನ ತಾವು ವಾಸವಾಗಿರುವ `ಡಿ – 29′ ಸಂಖ್ಯೆಯ ಮನೆಗೆ ಬೀಗ ಹಾಕಿದ್ದರು. ಅವರು ಮಲ್ಲಾಪುರದಲ್ಲಿ ಇಲ್ಲ ಎಂಬುದನ್ನು ಅರಿತ ಕಳ್ಳರು ಅವರ ಮನೆಗೆ ನುಗ್ಗಿ 10 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಡಿಸೆಂಬರ್ 9ರ ರಾತ್ರಿ ಪಕ್ಕದ ಮನೆಯಲ್ಲಿರುವ ಕೈಗಾ ಅಣು ಘಟಕದ ಟೆಕ್ನಿಕಲ್ ಆಫಿಸರ್ ಪ್ರವರಕುಮಾರ ಅವರು ಉತ್ತರಕುಮಾರ ಅವರ ಮನೆಗೆ ಬೀಗ ಹಾಕಿದನ್ನು ಗಮನಿಸಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಅವರ ಮನೆ ಬೀಗ ಒಡೆದಿತ್ತು. ಕೂಡಲೇ ಉತ್ತರ ಕುಮಾರ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. `ತಾನು ಟೌನ್ಶಿಪ್ಪಿಗೆ ಬರುವುದು ಒಂದು ದಿನ ತಡವಾಗುತ್ತದೆ. ಕಳ್ಳತನ ನಡೆದ ಬಗ್ಗೆ ಪೊಲೀಸರಿಗೆ ತಿಳಿಸಿ’ ಎಂದು ಉತ್ತರಕುಮಾರ ಕೇಳಿಕೊಂಡರು. ಈ ಹಿನ್ನಲೆ ಪಕ್ಕದ ಮನೆಯಲ್ಲಿ ನಡೆದ ಕಳ್ಳತನದ ಬಗ್ಗೆ ಪ್ರವರ ಕುಮಾರ ಪೊಲೀಸ್ ದೂರು ನೀಡಿದ್ದಾರೆ.




