ಶಿರಸಿ: ಕಳೆದ 25 ವರ್ಷಗಳಿಂದ ದಲಿತ ಸಾಹಿತಿಗಳನ್ನು ಗುರುತಿಸಿ ಅವರಿಗೆ ಗೌರವಿಸುತ್ತಿರುವ ಸುಭಾಷ ಕಾನಡೆ ಅವರ ಸೇವೆಯನ್ನು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಸ್ಮರಿಸಿದೆ. ದೆಹಲಿಯ ಪಂಚಶೀಲ ಆಶ್ರಮದಲ್ಲಿ ನಡೆದ ಅಕಾಡಮಿಯ 40ನೇ ರಾಷ್ಟ್ರೀಯ ಸಮ್ಮೇಳನ ನಡೆದಿದ್ದು, ಈ ವೇದಿಕೆಯಲ್ಲಿ ಸುಭಾಷ ಕಾನಡೆ ಅವರಿಗೆ `ಪ್ರೋಫೆಸರ್’ ಎಂಬ ಬಿರುದು ನೀಡಿ ಗೌರವಿಸಲಾಯಿತು.
ಸುಭಾಷ ಕಾನಡೆ ಅವರು ಕೈಗಾ ಅಣು ವಿದ್ಯುತ್ ಘಟಕದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದರು. ಜನ ಸಾಮಾನ್ಯರನ್ನು ಕೈಗಾ ಅಣು ಘಟಕದ ಒಳಗೆ ಕರೆದೊಯ್ದು ಅಲ್ಲಿನ ವಿದ್ಯುತ್ ಉತ್ಪಾದನೆಯ ಬಗ್ಗೆ ಅವರು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು. ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳ ನಡುವೆ ಸಂವಾದ ಕಾರ್ಯಕ್ರಮ ಆಯೋಜಿಸಿ ಅನುಮಾನಗಳನ್ನು ಬಗೆಹರಿಸುತ್ತಿದ್ದರು. ವೈಜ್ಞಾನಿಕ ಮನೋಭಾವನೆ ಬೆಳಸುವುದಕ್ಕಾಗಿ ಅವರು ಶ್ರಮಿಸಿದ್ದರು. ಕೈಗಾದಲ್ಲಿ ಅಖಿಲ ಭಾರತ ನೌಕರರ ಸಂಘದ ಅಧ್ಯಕ್ಷರಾಗಿದ್ದಾಗ ಕರ್ತವ್ಯದ ವೇಳೆ ಸಾವನಪ್ಪಿದವರ ಕುಟುಂಬಕ್ಕೆ ನೌಕರಿ ಕೊಡಿಸಲು ಹೋರಾಟ ನಡೆಸಿದ್ದರು. ವರ್ಗಾವಣೆ ಆಗದೇ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಿದ್ದರು.
ಈ ಎಲ್ಲದರ ನಡುವೆ ದಲಿತ ಸಾಹಿತಿ ಹಾಗೂ ಬರಹಗಾರರನ್ನು ಸಹ ಸುಭಾಷ ಕಾನಡೆ ಅವರು ಗುರುತಿಸಿದ್ದರು. ಜಾನಪದ ಕಲಾಕಾರರು ಸೇರಿ, ಕವಿತೆ, ಕಥೆ ಕಲೆಗಳನ್ನು ಕ್ರೂಡಿಕರಿಸಿ ಅಕಾಡೆಮಿ ಹಾಗೂ ಕಲಾವಿದರ ನಡುವೆ ಸೇತುವೆಯಾಗಿದ್ದರು. ಪ್ರತಿ ವರ್ಷ ಸುಮಾರು 60 ಕಲಾವಿದರನ್ನು ಕರೆದೊಯ್ದು ಅಕಾಡೆಮಿಯಿಂದ ಪ್ರಶಸ್ತಿ ಕೊಡಿಸುತ್ತಿದ್ದರು. ಅವರ ಈ ಎಲ್ಲಾ ಸಾಧನೆ ಗಮನಿಸಿದ ಅಕಾಡೆಮಿ ಈ ಬಾರಿ ಸುಭಾಷ ಕಾನಡೆ ಅವರಿಗೆ ಬಿರುದು ನೀಡಿ ಗೌರವಿಸಿದೆ.
ದಲಿತ ಸಾಹಿತ್ಯ ಅಕಾಡೆಮಿಯ ಬೆಳವಣಿಗೆಗೆ ಸುಭಾಷ ಕಾನಡೆ ಅವರು ಶ್ರಮಿಸಿದನ್ನು ಅಕಾಡೆಮಿಯ ಅಧ್ಯಕ್ಷ ಸುಮನಾಕ್ಷರ ಶ್ಲಾಘಿಸಿದರು.




