ಅಂಕೋಲಾ: ಅಪಾರ ದೈವಭಕ್ತರಾಗಿರುವ ಗ್ರಾ ಪಂ ಅಧಿಕಾರಿ ವಿಠ್ಠಲ ಬಾಂದಿ ಅವರ ಮನೆಯಲ್ಲಿನ ದೇವರ ಮೂರ್ತಿಗಳು ಕಳ್ಳತನವಾಗಿದೆ. ಪ್ರವೇಶವಿಲ್ಲದ ಗರ್ಭಗುಡಿಗೆ ಅಳವಡಿಸಿದ ಬೀಗ ಮುರಿದ ಕಳ್ಳರು ಒಳಗೆ ಪ್ರವೇಶಿಸಿ ಅಲ್ಲಿನ ಅಪರೂಪದ ವಿಗ್ರಹಗಳನ್ನು ದೋಚಿದ್ದಾರೆ.
ಕಳೆದ ಒಂದು ವರ್ಷದಿಂದ ವಿಠ್ಠಲ ಬಾಂದಿ ಅವರು ಅಚವೆ ಗ್ರಾಮ ಪಂಚಾಯತದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಹಿಲ್ಲೂರಿನ ತಿಂಗಳಬೈಲಿನಲ್ಲಿ ಮನೆ ಮಾಡಿರುವ ಅವರು ನಿತ್ಯ ಅಲ್ಲಿಂದಲೇ ಕಚೇರಿ ಓಡಾಟ ಮಾಡುತ್ತಾರೆ. ಅವರ ಮನೆಯಲ್ಲಿ ನೂರಾರು ಬಗೆಯ ದೇವರ ವಿಗ್ರಹಗಳಿದ್ದು, ಆ ಪೈಕಿ ಹಲವು ವಿಗ್ರಹಗಳು ಕಾಣೆಯಾಗಿವೆ.
ಭಾನುವಾರ ರಾತ್ರಿ ವಿಠ್ಠಲ ಬಾಂದಿ ಸೇರಿ ಕುಟುಂಬದವರೆಲ್ಲರೂ ಮನೆಯಲ್ಲಿರುವಾಗಲೇ ಈ ಕಳ್ಳತನ ನಡೆದಿದೆ. ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ ಮೇಲೆ ಮನೆಯೊಳಗೆ ಪ್ರವೇಶಿಸಿದ ಕಳ್ಳರು ಮನೆಗೆ ನುಗ್ಗಿದ್ದಾರೆ. ಅಂದಾಜಿನ ಪ್ರಕಾರ ಸೋಮವಾರ ನಸುಕಿನ 2.30ರ ಆಸುಪಾಸಿನಲ್ಲಿ ಕಳ್ಳತನ ನಡೆದಿರುವ ಸಾಧ್ಯತೆಗಳಿವೆ. ದೇವರ ಮನೆ ಬೀಗ ಒಡೆದು ಹಲವು ಬಗೆಯ ದೇವರ ಮೂರ್ತಿಗಳನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳರು ಎಲ್ಲಾ ದೇವರ ಮೂರ್ತಿ ಕದ್ದಿಲ್ಲ. ಮರುದಿನದ ಪೂಜೆಗೆ ಅಗತ್ಯವಿರುವ ಮೂರ್ತಿಗಳನ್ನು ಗರ್ಭಗುಡಿಯೊಳಗೆ ಬಿಟ್ಟು ಹೋಗಿದ್ದಾರೆ.
ಇನ್ನೂ ಕಳ್ಳರು ಗರ್ಭಗುಡಿ ಪ್ರವೇಶಿಸುವುದು ಸುಲಭವಾಗಿರಲಿಲ್ಲ. ಮನೆಯವರೆಲ್ಲರೂ ಮಲಗಿದ್ದರೂ ಅವರಿಗೆ ಎಚ್ಚರವಾಗದಂತೆ ಬಂದು ಕೈ ಚಳಕ ಪ್ರದರ್ಶಿಸಿದ್ದಾರೆ. 1.30 ಲಕ್ಷ ರೂ ಮೌಲ್ಯದ ಹಿತ್ತಾಳೆಯ ವಿಗ್ರಹ, ಐದು ಕಪೀಲ ಕಲ್ಲುಗುಂಡಿನ ಜೊತೆ ಹಳೆಯ ನೌಕಿಯಾ ಮೊಬೈಲನ್ನು ಕಳ್ಳರು ಅಪಹರಿಸಿದ್ದಾರೆ. ದೇವರ ಮನೆಯಲ್ಲಿನ ಚಿಲ್ಲರೆ ಕಾಸಿಗೆ ಆ ಕಳ್ಳರು ಆಸೆ ಪಟ್ಟಿಲ್ಲ!
ಕಳ್ಳತನದ ಬಗ್ಗೆ ವಿಠ್ಠಲ ಬಾಂದಿ ಅವರು ಪೊಲೀಸ್ ದೂರು ನೀಡಿದ್ದು, ಪೊಲೀಸರು ಕಳ್ಳರ ಹುಡುಕಾಟ ನಡೆಸಿದ್ದಾರೆ.




