ಭಟ್ಕಳ: ಮುರುಡೇಶ್ವರ ಪ್ರವಾಸಕ್ಕೆ ಬಂದು ಅರಬ್ಬಿ ಸಮುದ್ರದಲ್ಲಿ ಕಣ್ಮರೆಯಾಗಿದ್ದ ಮೂವರ ಶವ ಬುಧವಾರ ಸಿಕ್ಕಿದೆ. ಮಂಗಳವಾರ ಒಬ್ಬರ ಶವ ಸಿಕ್ಕಿದ್ದು, ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ 46 ವಿದ್ಯಾರ್ಥಿಗಳಲ್ಲಿ ನಾಲ್ವರು ಸಾವನಪ್ಪಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳ ಜೊತೆ ಆರು ಶಿಕ್ಷಕರು ಮಂಗಳವಾರ ಮುರುಡೇಶ್ವರಕ್ಕೆ ಬಂದಿದ್ದರು. ಅಲೆಗಳ ಅಬ್ಬರಕ್ಕೆ ಏಳು ವಿದ್ಯಾರ್ಥಿಗಳು ನೀರು ಪಾಲಾಗಿದ್ದರು. ಈ ಪೈಕಿ ಸ್ಥಳೀಯರು ಮೂವರನ್ನು ರಕ್ಷಿಸಿದ್ದರು. ಮಂಗಳವಾರ ಸಂಜೆ ಶ್ರಾವಂತಿ ಎಂಬಾತರು ಶವವಾಗಿದ್ದರು. ಉಳಿದ ಮೂವರಿಗಾಗಿ ಹುಡುಕಾಟ ನಡೆದಿದ್ದು, ಕಾಣೆಯಾಗಿದ್ದ ದೀಕ್ಷಾ, ಲಾವಣ್ಯ, ವಂದನಾ ಎಂಬಾತರ ಶವ ಬುಧವಾರ ಪತ್ತೆಯಾಗಿದೆ.
ಮುರುಡೇಶ್ವರ ದೇವಾಲಯದ ಹಿಂದಿನ ಸಮುದ್ರದಲ್ಲಿ ಬಿದ್ದಿದ್ದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಸಾಗಿಸಲಾಯಿತು. ಸಮುದ್ರದ ಅಲೆಗೆ ಸಿಲುಕಿ ರಕ್ಷಣೆಗೆ ಒಳಗಾದ ಯಶೋಧ, ಲಿಪಿಕಾ, ವೀಕ್ಷಣಾ ಎಂಬಾತರು ಆರ್ಎನ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸೇರಿ ಅನೇಕರು ಅವರ ಆರೋಗ್ಯ ವಿಚಾರಿಸಿದರು.
ಮರಳಿ ಮನೆಗೆ ಹೊರಟ ಮಕ್ಕಳು
ಮುರುಡೇಶ್ವರ ಪ್ರವಾಸಕ್ಕೆ ಬಂದು ಅಪಾಯಕ್ಕೆ ಸಿಲುಕಿದ್ದ ಮಕ್ಕಳನ್ನು ಉತ್ತರ ಕನ್ನಡ ಜಿಲ್ಲಾಡಳಿತ ಅವರ ಊರಿಗೆ ಕಳುಹಿಸಿದೆ. ಬದುಕಿದವರನ್ನು ಬಸ್ ಮೂಲಕ ಅವರ ಮನೆಗೆ ಕಳುಹಿಸಿಕೊಡಲಾಯಿತು. ಸಾವನಪ್ಪಿದ ನಾಲ್ಕು ವಿದ್ಯಾರ್ಥಿಗಳ ಆಸನಗಳು ಖಾಲಿಯಿದ್ದು, ಬಸ್ಸಿನಲ್ಲಿದ್ದವರೆಲ್ಲರೂ ಅಳುತ್ತಿದ್ದರು.
ಪರಿಹಾರ ಹಾಗೂ ಪ್ರವೇಶ ನಿಷೇಧ
ದುರಂತದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕಂಬನಿ ಮಿಡಿದಿದ್ದು, ಸಾವನಪ್ಪಿದವರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಮುನ್ನಚ್ಚರಿಕಾ ಕ್ರಮವಾಗಿ ಮುರುಡೇಶ್ವರ ಕಡಲತೀರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಅನೇಕ ಅಧಿಕಾರಿಗಳು ಮುರುಡೇಶ್ವರದಲ್ಲಿ ಬೀಡು ಬಿಟ್ಟಿದ್ದಾರೆ.




